ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿದ್ದ ಐತಿಹಾಸಿಕ ಹಿಂದೂ ದೇವಾಲಯವೊಂದನ್ನು ಧ್ವಂಸಗೊಳಿಸಿರುವ ಘಟನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನೆರೆ ರಾಷ್ಟ್ರದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಅವರ ಪೂಜಾ ಸ್ಥಳಗಳ ರಕ್ಷಣೆಯ ವಿಷಯದಲ್ಲಿ ಪಾಕಿಸ್ತಾನ ಸರ್ಕಾರ ತೋರುತ್ತಿರುವ ಬೇಜವಾಬ್ದಾರಿತನವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತೀವ್ರವಾಗಿ ಖಂಡಿಸಿದೆ.
ಘಟನೆಯ ಹಿನ್ನೆಲೆ:
ಪಾಕಿಸ್ತಾನದ ಲಾಹೋರ್ನಿಂದ ಸುಮಾರು 130 ಕಿಲೋಮೀಟರ್ ದೂರದಲ್ಲಿರುವ ನರೋವಾಲ್ ಜಿಲ್ಲೆಯ ಸಿರಾಜ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುವ ಸಂಘಟನೆಯಾದ ‘ಪಾಕಿಸ್ತಾನ್ ಮಸಿಹಾ ಮಿಲ್ಲತ್ ಪಾರ್ಟಿ’ (PMMP) ನೀಡಿದ ವರದಿಯ ಪ್ರಕಾರ, 2026ರ ಆಗಸ್ಟ್ 21 ರಂದು ಸುಮಾರು 1,000 ಚದರ ಮೀಟರ್ ವಿಸ್ತೀರ್ಣದಲ್ಲಿದ್ದ ಈ ಭವ್ಯ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ.
ಸ್ಥಳೀಯ ಮೂಲಗಳ ಪ್ರಕಾರ, ದೇವಾಲಯದ ಪಕ್ಕದಲ್ಲೇ ಇದ್ದ ಮದರಸಾವನ್ನು (ಇಸ್ಲಾಮಿಕ್ ಸೆಮಿನರಿ) ವಿಸ್ತರಿಸುವ ಉದ್ದೇಶದಿಂದ ಕಟ್ಟಡವನ್ನು ಉದ್ದೇಶಪೂರ್ವಕವಾಗಿ ನೆಲಸಮ ಮಾಡಲಾಗಿದೆ. ಅಷ್ಟೇ ಅಲ್ಲದೆ, ದೇವಾಲಯದ ಗುಮ್ಮಟದಲ್ಲಿದ್ದ ಬೆಲೆಬಾಳುವ ಲೋಹದ ಫಿಟ್ಟಿಂಗ್ಗಳು ಮತ್ತು ಇಟ್ಟಿಗೆಗಳನ್ನು ಕಾನೂನುಬಾಹಿರವಾಗಿ ಸಾಗಿಸಲಾಗಿದೆ ಎಂದು ಆರೋಪಿಸಲಾಗಿದೆ.
ಆದರೆ, ಪಾಕಿಸ್ತಾನದಲ್ಲಿ ಹಿಂದೂ ಮತ್ತು ಸಿಖ್ ಧಾರ್ಮಿಕ ಆಸ್ತಿಗಳನ್ನು ನಿರ್ವಹಿಸುವ ‘ಎವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್’ (ETPB) ಈ ಆರೋಪವನ್ನು ನಿರಾಕರಿಸಿದ್ದು, ಭಾರಿ ಮಳೆಯಿಂದಾಗಿ ಕಟ್ಟಡವು ತಾನಾಗಿಯೇ ಕುಸಿದು ಬಿದ್ದಿದೆ ಎಂದು ಸಮರ್ಥಿಸಿಕೊಂಡಿದೆ.
ಭಾರತದ ತೀವ್ರ ಆಕ್ಷೇಪ!
ಈ ಘಟನೆಯ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಇದು ಅತ್ಯಂತ ಖಂಡನೀಯ ವಿಧ್ವಂಸಕ ಕೃತ್ಯ” ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಗಲ್ಲು ಶಿಕ್ಷೆ ನೀಡಿ, ಪತ್ನಿಗೆ ವಿಚ್ಛೇದನ ನೀಡುತ್ತೇನೆ!
“ಶತಮಾನದಷ್ಟು ಹಳೆಯದಾದ ಅಲ್ಪಸಂಖ್ಯಾತರ ಪೂಜಾ ಸ್ಥಳವನ್ನು ರಕ್ಷಿಸುವಲ್ಲಿ ಅಲ್ಲಿನ ಅಧಿಕಾರಿಗಳು ತೋರಿರುವ ಉದಾಸೀನತೆ ಮತ್ತು ವೈಫಲ್ಯ ಆತಂಕಕಾರಿಯಾಗಿದೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ಅಸುರಕ್ಷತೆ ಮತ್ತು ಅವರ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಗೆ ಈ ಘಟನೆ ಸಾಕ್ಷಿಯಾಗಿದೆ” ಎಂದು ಅವರು ಜರೆದಿದ್ದಾರೆ.