ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಕಳೆದ ಎಂಟು ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿಯರ ಕೇಸ್ ಕೊನೆಗೂ ಸುಖಾಂತ್ಯ ಕಂಡಿದೆ. ರಾಜ್ಯ ಸಿಐಡಿ ಅಧಿಕಾರಿಗಳ ತೀವ್ರ ಕಾರ್ಯಾಚರಣೆಯ ಫಲವಾಗಿ ಇಬ್ಬರೂ ಯುವತಿಯರು ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಆದರೆ, ಅವರು ನಾಪತ್ತೆಯಾದ ದಿನದಿಂದ ಹಿಡಿದು ಇವತ್ತು ಸಿಕ್ಕಿಬಿದ್ದಿರುವ ವರೆಗಿನ ಅವರ ಜರ್ನಿ ಮಾತ್ರ ನಿಜಕ್ಕೂ ಯಾರಿಗಾದರೂ ಅಚ್ಚರಿ ಮೂಡಿಸುವಂತಿದೆ.
ಡಿಜಿಟಲ್ ಹೆಜ್ಜೆಗುರುತುಗಳೇ ಇಲ್ಲದ ಪ್ಲಾನ್!
ಜನವರಿ 31ರಂದು ದ್ವಿತೀಯ ಪಿಯುಸಿ ಓದುತ್ತಿದ್ದ ತನಿಷ್ಕಾ ಮತ್ತು ಪ್ರಥಮ ಪಿಯುಸಿ ಓದುತ್ತಿದ್ದ ತೇಜಸ್ವಿನಿ ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಆದರೆ ಅವರು ಮೊದಲೇ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದರು. ಪೊಲೀಸರು ತಮ್ಮನ್ನು ಮೊಬೈಲ್ ಮೂಲಕ ಟ್ರ್ಯಾಕ್ ಮಾಡಬಾರದು ಎಂಬ ಕಾರಣಕ್ಕೆ ಇಬ್ಬರೂ ತಂತಮ್ಮ ಮೊಬೈಲ್ ಫೋನ್ಗಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರು.
ಅಷ್ಟೇ ಅಲ್ಲದೆ ಯಾವುದೇ ಎಟಿಎಂ ಕಾರ್ಡ್ ಅಥವಾ ನಗದು ಹಣವನ್ನೂ ಅವರು ತೆಗೆದುಕೊಂಡು ಹೋಗಿರಲಿಲ್ಲ. ಕೇವಲ ತಮ್ಮ ಕಾಲೇಜು ಬ್ಯಾಗ್ ಮತ್ತು ಆಧಾರ್ ಕಾರ್ಡ್ಗಳನ್ನು ಮಾತ್ರ ಜೊತೆಯಲ್ಲಿ ಇಟ್ಟುಕೊಂಡಿದ್ದರು. ಸರ್ಕಾರದ ಉಚಿತ ಬಸ್ ಪ್ರಯಾಣದ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಬಳಸಿಕೊಂಡು ಅವರು ನಗರ ದಾಟಿದ್ದರು.
ಹೈಕೋರ್ಟ್ ಮೆಟ್ಟಿಲೇರಿದ್ದ ಕುಟುಂಟ:
ಯುವತಿಯರು ನಾಪತ್ತೆಯಾದ ಬಳಿಕ ಪೋಷಕರು ವಿದ್ಯಾರಣ್ಯಪುರ ಮತ್ತು ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದರು. ಪೊಲೀಸರು 50ಕ್ಕೂ ಹೆಚ್ಚು ಕಡೆಗಳಲ್ಲಿ ತಲಾಶ್ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಇತ್ತ ಮಗಳ ನೆನಪಿನಲ್ಲಿ ಕಣ್ಣೀರು ಹಾಕುತ್ತಿದ್ದ ತನಿಷ್ಕಾ ಪೋಷಕರು ಕೊನೆಗೆ ಕರ್ನಾಟಕ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದರು. ಪ್ರಕರಣದ ಗಾಂಭೀರ್ಯತೆಯನ್ನು ಅರಿತ ಕೋರ್ಟ್ ಆದೇಶದಂತೆ, ತನಿಖೆಯನ್ನು ಹೈಟೆಕ್ ವಿಭಾಗವಾದ ಸಿಐಡಿಗೆ ವಹಿಸಲಾಯಿತು.
ಮಹದೇಶ್ವರ ಬೆಟ್ಟದ ನಿಗೂಢ ಸೆಲ್ಫಿ!
ತನಿಖೆಯ ಆರಂಭಿಕ ಹಂತದಲ್ಲಿ ಸಿಐಡಿ ಅಧಿಕಾರಿಗಳಿಗೆ ಇಬ್ಬರೂ ಯುವತಿಯರು ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಸುಳಿವು ಸಿಕ್ಕಿತ್ತು. ಅಲ್ಲಿ ಇಬ್ಬರೂ ಯುವತಿಯರು ಅಪರಿಚಿತ ಮಗುವೊಂದರ ಜೊತೆ ನಗುತ್ತಾ, ಆಟವಾಡುತ್ತಾ ಕಾಲ ಕಳೆದಿದ್ದರು.
ಆ ಮಗುವಿನ ಮುಗ್ಧತೆಗೆ ಮನಸೋತ ಇಬ್ಬರು ಗೆಳತಿಯರು, ಮಗುವಿನ ತಾಯಿಯ ಜೊತೆ ಸೇರಿ ಒಂದು ಸೆಲ್ಫಿ ಫೋಟೋಗೆ ಫೋಸ್ ನೀಡಿದ್ದರು! ಅಧಿಕಾರಿಗಳ ಕೈಗೆ ಈ ಸೆಲ್ಫಿ ಫೋಟೋ ಸಿಕ್ಕಾಗ ತನಿಖೆಗೆ ಹೊಸ ಆಶಾಕಿರಣ ಮೂಡಿತು. ಆದರೆ, ದುರದೃಷ್ಟವಶಾತ್ ಆ ಫೋಟೋ ಸಿಕ್ಕ ನಂತರವೂ ಯುವತಿಯರು ಅಲ್ಲಿಂದ ಎಲ್ಲಿಗೆ ಹೋದರು? ಎತ್ತ ಸಾಗಿದರು? ಎಂಬ ಯಾವುದೇ ಸ್ಪಷ್ಟ ಸುಳಿವು ಸಿಗದೆ ಪೊಲೀಸರು ಮತ್ತೆ ಕತ್ತಲಲ್ಲಿ ತಡಕಾಡುವಂತಾಯಿತು. ಯುವತಿಯರು ಮತ್ತೆ ಮಾಯವಾಗಿದ್ದರು.
ಸುಳಿವು ನೀಡಿದ ಆಧಾರ್:
ತಿಂಗಳುಗಳು ಉರುಳಿದರೂ ಇಬ್ಬರ ಪತ್ತೆಯಾಗದಿದ್ದಾಗ, ಇಬ್ಬರೂ ಡಿಜಿಟಲ್ ಲೋಕದಿಂದ ಸಂಪೂರ್ಣವಾಗಿ ದೂರವಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ಸಸ್ಪೆನ್ಸ್ ಸಿನಿಮಾದ ಕ್ಲೈಮ್ಯಾಕ್ಸ್ನಂತೆ ಇಲ್ಲೊಂದು ದೊಡ್ಡ ಟ್ವಿಸ್ಟ್ ಕಾಯುತ್ತಿತ್ತು. ಹಲವು ತಿಂಗಳುಗಳ ಕಾಲ ತಲೆಮರೆಸಿಕೊಂಡಿದ್ದ ತನಿಷ್ಕಾ, ಹೊರಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಹೊಸ ಸಿಮ್ ಕಾರ್ಡ್ ಖರೀದಿಸಲು ಮುಂದಾಗಿದ್ದಳು. ಇದಕ್ಕಾಗಿ ಆಕೆ ತನ್ನ ಅಸಲಿ ಆಧಾರ್ ಕಾರ್ಡ್ ಅನ್ನೇ ಬಳಸಿದಳು!
ಅವಳು ಆಧಾರ್ ಸಂಖ್ಯೆಯನ್ನು ನಮೂದಿಸುತ್ತಿದ್ದಂತೆ, ಇತ್ತ ಹೈಟೆಕ್ ಕಣ್ಗಾವಲು ಇಟ್ಟಿದ್ದ ಸಿಐಡಿ ನೆಟ್ವರ್ಕ್ಗೆ ‘ಆಧಾರ್ ಬಳಕೆ’ಯ ಕುರಿತು ಟೆಲಿಕಾಂ ಸರ್ವಿಸ್ ಪ್ರೊವೈಡರ್ನಿಂದ ತಕ್ಷಣವೇ ಲೈವ್ ಅಲರ್ಟ್ ರವಾನೆಯಾಯಿತು.
ಯುವಕನ ಪರಿಚಯ, ಮದುವೆ:
ಮಲೆ ಮಹದೇಶ್ವರ ಬೆಟ್ಟದಲ್ಲಿದ್ದ ಸಂದರ್ಭದಲ್ಲಿ ತನಿಷ್ಕಾಗೆ ಕನಕಪುರ ತಾಲೂಕಿನ ಯುವಕನೊಬ್ಬನ ಪರಿಚಯವಾಗಿ, ಬಳಿಕ ಅವರಿಬ್ಬರ ನಡುವೆ ವಿವಾಹವಾಗಿತ್ತು. ತನಿಖೆಯ ವೇಳೆ ಯುವಕನ ಕುಟುಂಬಕ್ಕೆ ತನಿಷ್ಕಾ ತಾನು ಹಾಗೂ ತೇಜಸ್ವಿನಿ ಸಹೋದರಿಯರೆಂದೂ, ತಮ್ಮ ಕುಟುಂಬದಲ್ಲಿ ಯಾರೂ ಇಲ್ಲವೆಂದು ಸುಳ್ಳು ಹೇಳಿ ನಂಬಿಸಿದ್ದಳು. ಅಷ್ಟೇ ಅಲ್ಲದೆ ತನ್ನ ಪರಮ ಆಪ್ತ ಗೆಳತಿ ತೇಜಸ್ವಿನಿಯನ್ನು ಸ್ವಂತ ತಂಗಿ ಎಂದು ಸುಳ್ಳು ಹೇಳಿ ತನ್ನೊಂದಿಗೇ ಇರಿಸಿಕೊಂಡಿದ್ದಳು.
ಕಥೆಗೆ ಸಿಕ್ಕ ದೊಡ್ಡ ಟ್ವಿಸ್ಟ್: ಒಬ್ಬಳು ಈಗ ಗರ್ಭಿಣಿ!
ಸಿಮ್ ಖರೀದಿ ಮೂಲಕ ಸಿಕ್ಕ ಮಾಹಿತಿಯೊಂದಿಗೆ ಸಿಐಡಿ ಅಧಿಕಾರಿಗಳು ತಮ್ಮದೇ ಆದ ವಿಶೇಷ ತಂತ್ರಜ್ಞಾನ ಮತ್ತು ನೆಟ್ವರ್ಕ್ ಬಳಸಿ ಎಂಟು ತಿಂಗಳ ಸತತ ಕಾರ್ಯಾಚರಣೆಯ ಬಳಿಕ ಕೊನೆಗೂ ಯುವತಿಯರನ್ನು ಪತ್ತೆ ಹಚ್ಚಿದ್ದಾರೆ. ಆದರೆ ಇಷ್ಟು ದಿನಗಳ ಕಾಲ ಈ ಇಬ್ಬರು ಹುಡುಗಿಯರು ಎಲ್ಲಿದ್ದರು ಮತ್ತು ಏನು ಮಾಡುತ್ತಿದ್ದರು ಎಂಬ ಸತ್ಯ ಹೊರಬಿದ್ದಾಗ ಅಧಿಕಾರಿಗಳೇ ಬೆರಗಾಗಿದ್ದಾರೆ. ಇಷ್ಟು ದಿನಗಳ ಅವಧಿಯಲ್ಲಿ ನಾಪತ್ತೆಯಾಗಿದ್ದ ಯುವತಿಯರ ಪೈಕಿ ಒಬ್ಬಳು ಮದುವೆಯಾಗಿದ್ದು, ಪ್ರಸ್ತುತ ಗರ್ಭಿಣಿಯಾಗಿದ್ದಾಳೆ ಎಂಬ ಶಾಕಿಂಗ್ ಮಾಹಿತಿ ಲಭ್ಯವಾಗಿದೆ!
ಮನೆಯವರ ಕಣ್ಣು ತಪ್ಪಿಸಿ ಓಡಿಹೋಗಿದ್ದ ಇಬ್ಬರು ಗೆಳತಿಯರು ಬೇರೆ ಊರಿನಲ್ಲಿ ವಾಸವಿದ್ದರು ಎನ್ನಲಾಗಿದ್ದು, ಈ 8 ತಿಂಗಳ ಅವಧಿಯಲ್ಲಿ ಅವರ ಜೀವನ ಶೈಲಿ ಮತ್ತು ಮದುವೆಯಾದ ಹಿನ್ನೆಲೆಯ ಸಂಪೂರ್ಣ ತನಿಖೆಯನ್ನು ಸಿಐಡಿ ಚುರುಕುಗೊಳಿಸಿದೆ
ಇದನ್ನೂ ಓದಿ: ಗಲ್ಲು ಶಿಕ್ಷೆ ನೀಡಿ, ಪತ್ನಿಗೆ ವಿಚ್ಛೇದನ ನೀಡುತ್ತೇನೆ!
ಯುವತಿಯರು ಸುರಕ್ಷಿತವಾಗಿ ಪತ್ತೆಯಾಗಿರುವುದು ಪೋಷಕರಿಗೆ ನಿರಾಳತೆ ತಂದಿದ್ದರೂ, ಅವರು ನಡೆಸಿರುವ ಈ ನಾಟಕೀಯ ಓಟ ಹಾಗೂ ಟ್ವಿಸ್ಟ್ಗಳು ಸದ್ಯ ಇಡೀ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.