Zameer Ahmed Khan
ರಾಜಕೀಯ ಜಿದ್ದಾಜಿದ್ದಿ, ಆಂತರಿಕ ಭಿನ್ನಮತದ ಚರ್ಚೆಗಳು ಹಾಗೂ ಹೈಕಮಾಂಡ್ ಮಟ್ಟದ ಹಗ್ಗಜಗ್ಗಾಟಗಳಿಗೆ ಕೊನೆಗೂ ಬ್ರೇಕ್ ಬಿದ್ದಿದೆ. ಈ ಬ್ರೇಕ್ನೊಂದಿಗೆ ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆಯ ಮಹಾ ಪರ್ವ ಪೂರ್ಣಗೊಂಡಿದೆ. ಅದರಂತೆ ಒಟ್ಟು 20 ಶಾಸಕರು ಲೋಕಭವನದ ಆವರಣದಲ್ಲಿ ನೂತನ ಸಚಿವರಾಗಿ ಅದ್ಧೂರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ!
ಈ 20 ಶಾಸಕರಲ್ಲಿ ಎಲ್ಲರ ಗಮನ ಸೆಳೆದದ್ದು ಝಮೀರ್ ಅಹ್ಮದ್ ಖಾನ್. ಡಿಕೆಶಿ ಸಂಪುಟಕ್ಕೆ ಚಾಮರಾಜಪೇಟೆ ಶಾಸಕನ ಎಂಟ್ರಿ ಕರ್ನಾಟಕ ರಾಜಕಾರಣದಲ್ಲಿ ಹಲವು ಆಯಾಮಗಳ ಚರ್ಚೆಗೆ ಕಾರಣವಾಗಿದೆ. ವಿವಾದಗಳ ಸುಳಿಯಲ್ಲಿದ್ದರೂ ಝಮೀರ್ ಅಹಮದ್ ಅವರು ಮತ್ತೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದರ ಹಿಂದಿನ ರಾಜಕೀಯ ಲೆಕ್ಕಾಚಾರಗಳ ಒಂದು ವಿಶ್ಲೇಷಣಾತ್ಮಕ ನೋಟ ಇಲ್ಲಿದೆ.
ಹೌದು, ಝಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ತಪ್ಪಿಸಲು ಕಾಂಗ್ರೆಸ್ ಒಳಗಡೆ ಮತ್ತು ಹೊರಗಡೆ ತೀವ್ರ ಪ್ರಯತ್ನ ಹಾಗೂ ವಿರೋಧಗಳು ನಡೆದಿದ್ದವು. ಈ ಪ್ರಯತ್ನಗಳ ಹಿಂದಿದದ್ದು ಮುಸ್ಲಿಂ ನಾಯಕರುಗಳು ಎಂಬುದೇ ವಿಶೇಷ.
ಅಂದರೆ ಪ್ರಭಾವಿ ಮುಸ್ಲಿಂ ನಾಯಕನಾಗಿ ಗುರುತಿಸಿಕೊಳ್ಳುತ್ತಿರುವ ಝಮೀರ್ ಅಹ್ಮದ್ ಅವರಿಗೆ ಕಡಿವಾಣ ಹಾಕಲು ಕಾಂಗ್ರೆಸ್ನಲ್ಲಿನ ಕೆಲ ಮುಸ್ಲಿಂ ನಾಯಕರುಗಳೇ ತೆರೆಮರೆಯ ಪ್ರಯತ್ನಕ್ಕೆ ಕೈ ಹಾಕಿದ್ದರು. ಆದರೆ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಅಭಯಹಸ್ತ ಝಮೀರ್ ಮೇಲಿತ್ತು.
“ಆದರೆ ಯಾವಾಗ ದಾವಣಗೆರೆ ಉಪಚುನಾವಣೆ ಸಂದರ್ಭದಲ್ಲಿ ಜಮೀರ್ ಅಹ್ಮದ್ ದೂರ ಉಳಿಯಲು ನಿರ್ಧರಿಸಿದ್ದರೋ, ಅದೇ ಕ್ಷಣದಲ್ಲಿ ಪಕ್ಷದ ಇತರೆ ಕೆಲವು ಮುಸ್ಲಿಂ ಮುಖಂಡರು ತೀವ್ರ ಸಕ್ರಿಯರಾಗಿದ್ದರು. ಇದರ ನಡುವೆ ಝಮೀರ್ ಮೇಲೆ ಗಂಭೀರ ಆರೋಪವೊಂದು ಕೂಡ ಕೇಳಿ ಬಂತು.
ಪಕ್ಷ ವಿರೋಧಿ ಚಟುವಟಿಕೆ ಆರೋಪ!
ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿ ಸಮರ್ಥ್ ಶಾಮನೂರು ಅವರ ವಿರುದ್ಧ ಕೆಲಸ ಮಾಡುವಂತೆ ಝಮೀರ್ ಅಹ್ಮದ್ ಅವರು ಮುಸ್ಲಿಂ ಮತದಾರರಿಗೆ ಪ್ರಚೋದನೆ ನೀಡಿದ್ದಾರೆ ಎನ್ನಲಾಗಿತ್ತು.
ಈ ಬಗ್ಗೆ ಶಾಸಕ ರಿಝ್ವಾನ್ ಅರ್ಷದ್ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಸಲೀಂ ಅಹ್ಮದ್ ಮತ್ತು ದಾವಣಗೆರೆಯ ಸ್ಥಳೀಯ ಕಾಂಗ್ರೆಸ್ ನಾಯಕರು ಝಮೀರ್ ವಿರುದ್ಧ ಹೈಕಮಾಂಡ್ಗೆ ದೂರನ್ನೂ ಕೂಡ ನೀಡಿದ್ದರು. ಈ ದೂರಿನೊಂದಿಗೆ ಅವರಿಗೆ ಸಚಿವ ಸ್ಥಾನ ನೀಡಬಾರದು ಮತ್ತು ಶಿಸ್ತು ಕ್ರಮ ಜರುಗಿಸಬೇಕು ಹೈಕಮಾಂಡ್ಗೆ ತಿಳಿಸಲಾಗಿತ್ತು.
ಇದಾಗ್ಯೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಝಮೀರ್ ಅಹ್ಮದ್ ಅವರನ್ನು ಸಂಪೂರ್ಣ ದೂರ ಮಾಡಿರಲಿಲ್ಲ. ಇದೇ ವೇಳೆ ಹೊರಬಿದ್ದಿದ್ದೇ ಆಡಿಯೋ ಕ್ಲಿಪ್.
ಝಮೀರ್ ಅಹ್ಮದ್ ಖಾನ್ ಅವರದ್ದು ಎನ್ನಲಾದ ವೈರಲ್ ಆಡಿಯೋ ಕ್ಲಿಪ್ ಕರ್ನಾಟಕ ರಾಜಕಾರಣದಲ್ಲಿ ಹಾಗೂ ಕಾಂಗ್ರೆಸ್ ಪಕ್ಷದೊಳಗೆ ದೊಡ್ಡ ಮಟ್ಟದ ಬಿರುಗಾಳಿ ಎಬ್ಬಿಸಿತ್ತು.
ಝಮೀರ್ ಅಹ್ಮದ್ ಮತ್ತು ಕಾಂಗ್ರೆಸ್ ಮುಖಂಡ ಮೊಹಮ್ಮದ್ ಸಿರಾಜ್ ನಡುವೆ ನಡೆದ ದೂರವಾಣಿ ಸಂಭಾಷಣೆ ಎನ್ನಲಾಗಿದ್ದ, ಈ ಆಡಿಯೋದಲ್ಲಿ ಕಾಂಗ್ರೆಸ್ ಬದಲಿಗೆ ಎಸ್ಡಿಪಿಐ ಅಥವಾ ಪಕ್ಷೇತರ ಮುಸ್ಲಿಂ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಹಾಗೂ ಹಣಕಾಸಿನ ನೆರವು ನೀಡುವಂತೆ ಬೆಂಬಲಿಗರಿಗೆ ಸೂಚನೆ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಡಿಕೆಶಿ ಸಂಪುಟದಿಂದ ಔಟ್:
ಈ ಆಡಿಯೋ ಕ್ಲಿಪ್ ಹೊರಬಿದ್ದ ಹಿನ್ನಲೆಯಲ್ಲಿ ಜೂನ್ 3 ರಂದು ನಡೆದ ಡಿ.ಕೆ. ಶಿವಕುಮಾರ್ ಅವರ ಸಂಪುಟದ ಮೊದಲ ಪಟ್ಟಿಯಲ್ಲಿ (13 ಸಚಿವರ ಪ್ರಮಾಣ ವಚನ) ಝಮೀರ್ ಅಹ್ಮದ್ ಅವರ ಹೆಸರನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡಲಾಗಿತ್ತು. ಅವರಿಗೆ ಸಚಿವ ಸ್ಥಾನ ತಪ್ಪಿಸಲು ಪಕ್ಷದ ಒಂದು ಬಣ ತೀವ್ರವಾಗಿ ಒತ್ತಡ ಹೇರಿತ್ತು.
ಮೊದಲ ಸಂಪುಟ ರಚನೆ ವೇಳೆಝಮೀರ್ ಅವರಿಗೆ ಸ್ಥಾನ ಸಿಗದೇ ಇದ್ದಾಗ ಅವರು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಮುಂದಾಗಿದ್ದರು ಎನ್ನಲಾಗಿತ್ತು. ಆದರೆ, ಡಿ.ಕೆ. ಶಿವಕುಮಾರ್ ಅವರ ಸೋದರ ಡಿ.ಕೆ. ಸುರೇಶ್ ಅವರು ಝಮೀರ್ ಅವರನ್ನು ಸಮಾಧಾನಪಡಿಸಿ, ಮುಂದಿನ ಪಟ್ಟಿಯಲ್ಲಿ ಸಚಿವ ಸ್ಥಾನ ಕೊಡಿಸುವ ಭರವಸೆ ನೀಡಿದ್ದರು.
ಮತ್ತೊಂದೆಡೆ, ಮೊದಲ ಸಂಪುಟದಿಂದ ಹೊರಬಿದ್ದಿದ್ದ ಝಮೀರ್ ಅಹ್ಮದ್ ಅವರನ್ನು ಸಚಿವ ಸ್ಥಾನದಿಂದ ದೂರ ಇಡಲು ಯಶಸ್ವಿಯಾಗಿದ್ದ ಕೆಲವು ನಾಯಕರು, ತಾವೇ ಮುಸ್ಲಿಂ ಸಮುದಾಯದ ಮುಂಚೂಣಿ ಮುಖಂಡರಾಗುವ ಲೆಕ್ಕಾಚಾರ ಶುರು ಮಾಡಿದ್ದರು.
ಮುಸ್ಲಿಂ ಮುಖಂಡರುಗಳೇ ಗಪ್ ಚುಪ್!
ಝಮೀರ್ ಅಹ್ಮದ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅತ್ಯಂತ ಆಪ್ತ ವಲಯದ ನಾಯಕ. ಆರಂಭದಲ್ಲಿ ಸಿದ್ದರಾಮಯ್ಯ ಮುನಿಸಿಕೊಂಡಿದ್ದರೂ, ಝಮೀರ್ ಅವರನ್ನು ಕೈಬಿಟ್ಟರೆ ರಾಜ್ಯದಲ್ಲಿ ‘ಅಹಿಂದ’ (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ರಾಜಕಾರಣದ ಸಮೀಕರಣ ಒಡೆದುಹೋಗುತ್ತದೆ ಎಂದು ಹೈಕಮಾಂಡ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರಿಗೆ ಮನವರಿಕೆ ಮಾಡಿಕೊಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾದರು.
ಇದರ ನಡುವೆ ಝಮೀರ್ ಅಹ್ಮದ್ ಬೆಂಗಳೂರು ಭಾಗದ ಸುಮಾರು 5 ರಿಂದ 6 ಶಾಸಕರನ್ನು ತಮ್ಮ ಪರವಾಗಿ ನಿಲ್ಲಿಸಿಕೊಂಡು ಪಕ್ಷಕ್ಕೆ ಆಂತರಿಕವಾಗಿ ಬಿಕ್ಕಟ್ಟು ಸೃಷ್ಟಿಸುವ ಭೀತಿ ಹುಟ್ಟಿಸಿದ್ದರು. ಈ ಬಂಡಾಯವನ್ನು ತಡೆಯಲು ಹೈಕಮಾಂಡ್ ಮಣಿಯಲೇಬೇಕಾಯಿತು.
ಇತ್ತ ಝಮೀರ್ ಅಹ್ಮದ್ ಖಾನ್ ಅವರ ರಾಜಕೀಯ ರಣತಂತ್ರ ಮತ್ತು ದಿಢೀರ್ ಸಂಪುಟ ಮರುಸೇರ್ಪಡೆಯಿಂದಾಗಿ, ಅವರನ್ನು ವಿರೋಧಿಸುತ್ತಿದ್ದ ಕಾಂಗ್ರೆಸ್ನ ಇತರ ಮುಸ್ಲಿಂ ನಾಯಕರು ಈಗ ಸಂಪೂರ್ಣವಾಗಿ ಮೌನಕ್ಕೆ ಶರಣಾಗಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರೇ ಝಮೀರ್ ಹೆಸರನ್ನು ಅಂತಿಮಗೊಳಿಸಿರುವುದರಿಂದ, ಈಗ ಅವರ ವಿರುದ್ಧ ಮಾತನಾಡಿದರೆ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಭಯದಿಂದ ವಿರೋಧಿ ಮುಸ್ಲಿಂ ನಾಯಕರು ಮೌನವಾಗಿದ್ದಾರೆ.
ಇತ್ತ ಝಮೀರ್ ಅಹ್ಮದ್ ರಿಎಂಟ್ರಿಯಿಂದಾಗಿ ಪಕ್ಷದ ಕೆಲವು ಮುಸ್ಲಿಂ ಮುಖಂಡರು ಚಿಂತೆಗೀಡಾಗಿದ್ದಾರೆ. ಈ ರಾಜಕೀಯ ಆತಂಕವು ಮುಂಬರುವ ದಿನಗಳಲ್ಲಿ ಯಾವ ಮಟ್ಟಕ್ಕೆ ತಲುಪಲಿದೆ ಮತ್ತು ಪಕ್ಷದಲ್ಲಿ ಎಂತಹ ಆಂತರಿಕ ಕದನಕ್ಕೆ ಕಾರಣವಾಗಲಿದೆ ಎಂಬುದೇ ಈಗಿರುವ ಅಸಲಿ ಪ್ರಶ್ನೆ.
ಇದನ್ನೂ ಓದಿ: ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಆಹ್ವಾನ: ವೇತನ 90 ಸಾವಿರ ರೂ.
ಒಟ್ಟಾರೆಯಾಗಿ ಹೇಳುವುದಾದರೆ, ಸಚಿವ ಸ್ಥಾನದ ಈ ‘ಸೆಕೆಂಡ್ ಇನ್ನಿಂಗ್ಸ್’ ಝಮೀರ್ ಅಹ್ಮದ್ ಖಾನ್ ಅವರ ರಾಜಕೀಯ ಚಾಣಕ್ಯತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪಕ್ಷದೊಳಗಿನ ತೀವ್ರ ವಿರೋಧ ಹಾಗೂ ಆಡಿಯೋ ವಿವಾದದ ಸುಂಟರಗಾಳಿಯನ್ನೂ ಮೆಟ್ಟಿ ನಿಂತು ಸಂಪುಟ ಸೇರಿರುವ ಝಮೀರ್, ಸದ್ಯಕ್ಕೆ ಕರ್ನಾಟಕ ಕಾಂಗ್ರೆಸ್ನಲ್ಲಿ ತಾವೇ ‘ಅನ್ಸ್ಟಾಪಬಲ್’ ಮುಸ್ಲಿಂ ಲೀಡರ್ ಎಂಬುದನ್ನು ಹೈಕಮಾಂಡ್ ಮಟ್ಟದಲ್ಲೇ ಸಾಬೀತುಪಡಿಸಿದ್ದಾರೆ. ಈಗ ಸಿಕ್ಕಿರುವ ಈ ಹೊಸ ಬಲದೊಂದಿಗೆ ಝಮೀರ್ ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಯಾವ ರೀತಿಯ ಚದುರಂಗದಾಟ ಆಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಜಿಯೋ ಕನ್ನಡ ನ್ಯೂಸ್ನ ವಾಟ್ಸ್ಆ್ಯಪ್ ಗ್ರೂಪ್ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.