Mohammed Siraj
ಟಿ20 ವಿಶ್ವಕಪ್ (T20 World Cup 2026) ಆರಂಭಕ್ಕೂ ಮುನ್ನ ಭಾರತ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದೆ. ತಂಡದಲ್ಲಿದ್ದ ಪ್ರಮುಖ ವೇಗಿ ಹರ್ಷಿತ್ ರಾಣಾ (Harshit Rana) ಗಾಯಗೊಂಡು ಹೊರಬಿದ್ದಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಹರ್ಷಿತ್ ಅವರ ಕೈಗೆ ಗಾಯವಾಗಿತ್ತು. ಹೀಗಾಗಿ ಅವರು ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಇತ್ತ ಹರ್ಷಿತ್ ರಾಣಾ ಬದಲಿಗೆ ಟೀಮ್ ಇಂಡಿಯಾಗೆ ಮೊಹಮ್ಮದ್ ಸಿರಾಜ್ (Mohammed Siraj) ಎಂಟ್ರಿ ಕೊಟ್ಟಿದ್ದಾರೆ.
ಈ ಬಾರಿಯ ವಿಶ್ವಕಪ್ ತಂಡದಲ್ಲಿ ಮೊಹಮ್ಮದ್ ಸಿರಾಜ್ಗೆ ಸ್ಥಾನ ಲಭಿಸಿರಲಿಲ್ಲ. ತಂಡದ ಪ್ರಮುಖ ವೇಗಿಗಳಾಗಿ ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ ಆಯ್ಕೆಯಾಗಿದ್ದರು. ಆದರೆ ದುರಾದೃಷ್ಟ ಹರ್ಷಿತ್ ಅವರು ಗಾಯಗೊಂಡು ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.
ಇದರ ಬೆನ್ನಲ್ಲೇ ಮೊಹಮ್ಮದ್ ಸಿರಾಜ್ ಅವರಿಗೆ ಬುಲಾವ್ ನೀಡಲಾಗಿದ್ದು, ಅದರಂತೆ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಸಿರಾಜ್ ಮುಂಬೈನಲ್ಲಿ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ.
ಸಿರಾಜ್ಗೆ ಸಿಗಲಿದೆಯಾ ಅವಕಾಶ?
ಭಾರತ ಟಿ20 ವಿಶ್ವಕಪ್ ತಂಡದಲ್ಲಿರುವುದು ಕೇವಲ ಮೂವರು ವೇಗಿಗಳು ಮಾತ್ರ. ಇಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಅರ್ಷದೀಪ್ ಸಿಂಗ್ ಮುಖ್ಯ ಬೌಲರ್ಗಳಾಗಿ ಕಣಕ್ಕಿಳಿಯುವುದು ಖಚಿತ. ಇದಾಗ್ಯೂ ಮೂರನೇ ವೇಗಿಯನ್ನು ಕಣಕ್ಕಿಳಿಸಲು ಬಯಸಿದರೆ ಮೊಹಮ್ಮದ್ ಸಿರಾಜ್ಗೆ ಅವಕಾಶ ಸಿಗಲಿದೆ.
ಅದರಲ್ಲೂ ಬುಮ್ರಾಗೆ ಹೆಚ್ಚಿನ ವಿಶ್ರಾಂತಿ ನೀಡಲು ಮುಂದಾದರೆ ಮೊಹಮ್ಮದ್ ಸಿರಾಜ್ಗೆ ಅವಕಾಶ ದೊರೆಯಲಿದೆ. ಏಕೆಂದರೆ ಅತ್ತ ಹೆಚ್ಚುವರಿ ವೇಗಿಯಾಗಿ ಹಾರ್ದಿಕ್ ಪಾಂಡ್ಯ ಕೂಡ ತಂಡದಲ್ಲಿದ್ದು, ಪಾಂಡ್ಯ ಜೊತೆಗೆ ಶಿವಂ ದುಬೆ ಕೂಡ ಕೆಲ ಓವರ್ಗಳನ್ನು ಎಸೆಯಬಲ್ಲರು.
ಹೀಗಾಗಿ ದುರ್ಬಲ ತಂಡಗಳ ವಿರುದ್ಧದ ಪಂದ್ಯಗಳ ವೇಳೆ ಬುಮ್ರಾಗೆ ವಿಶ್ರಾಂತಿ ನೀಡಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನಿರ್ಧರಿಸಿದರೆ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯುವುದು ಖಚಿತ ಎಂದೇ ಹೇಳಬಹುದು.
ಟೀಮ್ ಇಂಡಿಯಾದ ಮೊದಲ ಪಂದ್ಯ ಯಾವಾಗ?
ಭಾರತ ತಂಡವು ಶನಿವಾರ (ಫೆ.7) ಅಮೆರಿಕ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಇದಾದ ಬಳಿಕ ಫೆಬ್ರವರಿ 12 ರಂದು ನಮೀಬಿಯಾ ಹಾಗೂ ಫೆಬ್ರವರಿ 15 ರಂದು ಪಾಕಿಸ್ತಾನ್ ತಂಡವನ್ನು ಎದುರಿಸಬೇಕಿದೆ. ಹಾಗೆಯೇ ಮೊದಲ ಸುತ್ತಿನ ತನ್ನ ಕೊನೆಯ ಪಂದ್ಯದಲ್ಲಿ ಭಾರತ ನೆದರ್ಲೆಂಡ್ಸ್ ವಿರುದ್ಧ ಕಣಕ್ಕಿಳಿಯಲಿದೆ.
ಇದನ್ನೂ ಓದಿ: ಸಹಕಾರಿ ಬ್ಯಾಂಕ್ನಲ್ಲಿ ಡೈವರ್ಗಳಿಗೆ ಉದ್ಯೋಗಾವಕಾಶ
ಭಾರತ ಟಿ20 ವಿಶ್ವಕಪ್ ತಂಡ:
ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, , ರಿಂಕು ಸಿಂಗ್, ಮೊಹಮ್ಮದ್ ಸಿರಾಜ್.