RCB
ಐಪಿಎಲ್ನಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡಿದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆಟಗಾರರನ್ನು ಝಿಂಬಾಬ್ವೆ ವಿರುದ್ಧದ ಟಿ20 ಸರಣಿಯಿಂದ ಸಂಪೂರ್ಣವಾಗಿ ಕಡೆಗಣಿಸಿರುವ ಬಿಸಿಸಿಐ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿಯ ವಿರುದ್ಧ ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಸಡಗೋಪನ್ ರಮೇಶ್ ತೀವ್ರವಾಗಿ ಕಿಡಿಕಾರಿದ್ದಾರೆ.
2025 ಮತ್ತು 2026ರ ಸಾಲಿನ ಐಪಿಎಲ್ ಆವೃತ್ತಿಗಳಲ್ಲಿ ಬ್ಯಾಕ್-ಟು-ಬ್ಯಾಕ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಆರ್ಸಿಬಿ ತಂಡದ ಒಬ್ಬನೇ ಒಬ್ಬ ಆಟಗಾರನಿಗೂ ಭಾರತ ತಂಡದಲ್ಲಿ ಸ್ಥಾನ ನೀಡದಿರುವುದು ಕ್ರಿಕೆಟ್ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಯ್ಕೆ ಪ್ರಕ್ರಿಯೆಯ ದ್ವಂದ್ವ ನೀತಿಯನ್ನು ತರಾಟೆಗೆ ತೆಗೆದುಕೊಂಡಿರುವ ರಮೇಶ್, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ಹೆಡ್ ಕೋಚ್ ಗೌತಮ್ ಗಂಭೀರ್ ಅವರ ನಿರ್ಧಾರಗಳನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. ಮಾಜಿ ಕ್ರಿಕೆಟಿಗ ಎತ್ತಿರುವ ಪ್ರಮುಖ ಆಕ್ಷೇಪಗಳು ಇಲ್ಲಿವೆ.
ಕೆಲವರಿಗಷ್ಟೇ ಐಪಿಎಲ್ ಮಾನದಂಡ: ಭಾರತೀಯ ಟಿ20 ತಂಡದ ಆಯ್ಕೆಯು ಐಪಿಎಲ್ ಪ್ರದರ್ಶನದ ಆಧಾರದ ಮೇಲೆಯೇ ನಡೆಯುತ್ತದೆ. ಆದರೆ ಈ ನಿಯಮ ಕೇವಲ ಆಯ್ದ ಕೆಲವು ಆಟಗಾರರಿಗೆ ಮಾತ್ರ ಅನ್ವಯಿಸುತ್ತಿದೆ ಎಂದು ರಮೇಶ್ ಅಸಮಾಧಾನ ಹೊರಹಾಕಿದ್ದಾರೆ.
ನಾಯಕತ್ವದ ಆಯ್ಕೆಯಲ್ಲಿ ತಾರತಮ್ಯ: ಐಪಿಎಲ್ನಲ್ಲಿ ತೋರಿದ ಫಾರ್ಮ್ ಆಧಾರದ ಮೇಲೆ ಶ್ರೇಯಸ್ ಅಯ್ಯರ್ ಅವರನ್ನು ಭಾರತ ತಂಡದ ನಾಯಕರನ್ನಾಗಿ ಮಾಡಲಾಗಿದೆ. ಆದರೆ, ಸತತ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್ಸಿಬಿ ತಂಡದ ಆಟಗಾರರನ್ನು ಮಾತ್ರ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.
ಬೆಂಚ್ ಕಾಯ್ದ ಆಟಗಾರರಿಗೆ ಮಣೆ: ವೈಭವ್ ಸೂರ್ಯವಂಶಿಯವರನ್ನು ಐಪಿಎಲ್ ಪ್ರದರ್ಶನದ ಮೇಲೆ ತಂಡಕ್ಕೆ ತರಲಾಗಿದೆ. ಇದೇ ವೇಳೆ, ಐಪಿಎಲ್ನ ದ್ವಿತೀಯಾರ್ಧದಲ್ಲಿ ತನ್ನದೇ ಫ್ರಾಂಚೈಸಿಯ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯದ ರವಿ ಬಿಷ್ಣೋಯ್ ಅವರನ್ನು ಭಾರತ ತಂಡದ ಆಡುವ ಬಳಗಕ್ಕೆ ಆಯ್ಕೆ ಮಾಡಿರುವುದರ ಹಿಂದೆ ಯಾವ ತರ್ಕವಿದೆ ಎಂದು ರಮೇಶ್ ಪ್ರಶ್ನಿಸಿದ್ದಾರೆ.
ಟಾಪ್ ಬೌಲರ್ಗಳ ಕಡೆಗಣನೆ: ಐಪಿಎಲ್ 2026ರ ಪರ್ಪಲ್ ಕ್ಯಾಪ್ ರೇಸ್ನಲ್ಲಿದ್ದ ಟಾಪ್ 10 ಬೌಲರ್ಗಳ ಪೈಕಿ ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್ ಸೇರಿದಂತೆ 5 ಮಂದಿ ಭಾರತೀಯ ಬೌಲರ್ಗಳಿದ್ದರು. ಆದರೆ ಇವರಲ್ಲಿ ಯಾರಿಗೂ ಝಿಂಬಾಬ್ವೆ ಸರಣಿಗೆ ಅವಕಾಶ ನೀಡಿಲ್ಲ.
ಕಳಪೆ ಪ್ರದರ್ಶನ ನೀಡಿದವರಿಗೆ ಸ್ಥಾನ: ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ 47ನೇ ಸ್ಥಾನದಲ್ಲಿದ್ದ ಹರ್ಷ್ ದುಬೆ, 55ನೇ ಸ್ಥಾನದ ಅಶೋಕ್ ಶರ್ಮಾ, ಮತ್ತು 89ನೇ ಸ್ಥಾನದಲ್ಲಿದ್ದ ಯಶ್ ಠಾಕೂರ್ ಅವರಂತಹ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಕೇವಲ ಕೆಲವೇ ಪಂದ್ಯಗಳನ್ನು ಆಡಿರುವ ಮಯಾಂಕ್ ಯಾದವ್ರನ್ನು ತಂಡಕ್ಕೆ ಸೇರಿಸಿಕೊಂಡಿರುವುದು ಆಯ್ಕೆ ಸಮಿತಿಯ ಪಾರದರ್ಶಕತೆಯನ್ನು ಪ್ರಶ್ನಿಸುವಂತೆ ಮಾಡಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ ಲಾಟರಿ ಪುನರಾರಂಭ?
ಬಿಸಿಸಿಐನ ಈ ವಿಲಕ್ಷಣ ಆಯ್ಕೆ ಪ್ರಕ್ರಿಯೆಯು ಕೇವಲ ಮಾಜಿ ಕ್ರಿಕೆಟಿಗರನ್ನು ಮಾತ್ರವಲ್ಲದೆ, ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿಸಿದೆ. ಸತತವಾಗಿ ಗೆಲ್ಲುವ ತಂಡದ ಪ್ರತಿಭೆಗಳನ್ನು ಕಡೆಗಣಿಸಿ, ಕಳಪೆ ಫಾರ್ಮ್ನಲ್ಲಿರುವ ಆಟಗಾರರಿಗೆ ಮಣೆ ಹಾಕುತ್ತಿರುವುದು ಭಾರತೀಯ ಕ್ರಿಕೆಟ್ನ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬ ಚರ್ಚೆ ಈಗ ಜೋರಾಗಿದೆ.