ಜಾತ್ಯತೀತ ಜನತಾ ದಳದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರ ಮುಂದಿನ ಕ್ಷೇತ್ರ ಯಾವುದು? ಈ ಪ್ರಶ್ನೆಗೆ ಕಳೆದ ತಿಂಗಳವರೆಗೆ ಚಾಮರಾಜನಗರ ವಿಧಾನಸಭಾ ಕ್ಷೇತ್ರ ಎಂಬ ಉತ್ತರ ಬರುತ್ತಿತ್ತು. ಆದರೆ ಯುವ ದಳಪತಿ ಸೋತಲ್ಲಿಂದಲೇ ಗೆಲ್ಲಲು ಪ್ಲ್ಯಾನ್ ರೂಪಿಸಿದ್ದಾರೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಅಂದರೆ ನಿಖಿಲ್ ಕುಮಾರಸ್ವಾಮಿ ಎಲ್ಲಿ ಸೋತರೋ ಅಲ್ಲಿಂದಲೇ ರಾಜಕೀಯ ಜೀವನ ಕಟ್ಟಿಕೊಳ್ಳಲು ಯೋಜನೆ ರೂಪಿಸುತ್ತಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದು 2019 ರಲ್ಲಿ. ಮೊದಲಿಗೆ ಲೋಕಸಭೆಗೆ ಸ್ಪರ್ಧಿಸಿದ್ದ ನಿಖಿಲ್ ಆ ಬಳಿಕ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡಲು ಮುಂದಾಗಿದ್ದರು. ಆದರೆ ಮೂರು ಬಾರಿ ಕೂಡ ಅವರಿಗೆ ಅದೃಷ್ಟ ಕೈ ಕೊಟ್ಟಿತ್ತು.
- 2019 ರಲ್ಲಿ ನಡೆದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಅವರು ಸುಮಲತಾ ಅಂಬರೀಷ್ ವಿರುದ್ಧ ಸೋಲನುಭವಿಸಿದ್ದರು.
- 2023 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿದ್ದ ನಿಖಿಲ್, ಕಾಂಗ್ರೆಸ್ನ ಇಕ್ಬಾಲ್ ಅನ್ಸಾರಿ ವಿರುದ್ಧ ಪರಾಜಯಗೊಂಡಿದ್ದರು.
- 2024 ರಲ್ಲಿ ನಡೆದ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ನ ಸಿಪಿ ಯೋಗೇಶ್ವರ್ ವಿರುದ್ಧ ಸ್ಪರ್ಧಿಸಿ ನಿಖಿಲ್ ಕುಮಾರಸ್ವಾಮಿ ಮೂರನೇ ಬಾರಿ ಸೋಲುಂಡಿದ್ದರು.
ಮುಂದಿನ ಕ್ಷೇತ್ರ ಯಾವುದು?
ಜನರ ತೀರ್ಪಿನಲ್ಲಿ ಮೂರು ಬಾರಿ ಸೋತಿರುವ ನಿಖಿಲ್ ಕುಮಾರಸ್ವಾಮಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯುವುದು ಖಚಿತವಾಗಿದೆ. ಅದು ಸಹ 2028ರ ವಿಧಾನಸಭಾ ಚುನಾವಣೆಯಲ್ಲಿ. ಇದಕ್ಕಾಗಿ ಅವರು ಈಗಾಗಲೇ ರಾಮನಗರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಜಾತ್ಯತೀತ ಜನತಾದಳ ಪಕ್ಷವನ್ನು ನಂಬಿರುವ ಕಾರ್ಯಕರ್ತರಿಗೆ ನಾನು ಯಾವಾಗಲೂ ಗೌರವ ಕೊಡುತ್ತೇನೆ. ಅದರಲ್ಲೂ ನನ್ನ ತಾತ ದೇವೇಗೌಡರಿಗೆ ರಾಜಕೀಯ ಮರುಜನ್ಮ ನೀಡಿದ ಮಣ್ಣನ್ನು ಹಾಗೂ ನನ್ನ ತಂದೆ ಕುಮಾರಸ್ವಾಮಿ ಅವರ ಕರ್ಮಭೂಮಿಯನ್ನು ನಾನು ಎಂದಿಗೂ ಬಿಟ್ಟು ಹೋಗುವುದಿಲ್ಲ.
ಅದರಂತೆ ಮುಂದಿನ ಚುನಾವಣೆಯಲ್ಲಿ ನಾನು ರಾಮನಗರದಲ್ಲೇ ಸ್ಪರ್ಧಿಸುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ರಾಮನಗರದಿಂದಲೇ ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆ ಮಾಡಲಿದ್ದೇನೆ ಎಂಬುದನ್ನು ಯುವ ದಳಪತಿ ಘೋಷಿಸಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಗೆ ರಾಮನಗರ ನಿಖಿಲ್ ಕುಮಾರಸ್ವಾಮಿಗೆ ಫಿಕ್ಸ್ ಎಂದೇ ಹೇಳಬಹುದು.
ನಿಖಿಲ್ ಕುಮಾರಸ್ವಾಮಿ ಅವರ ಸೋಲುಗಳ ಸಂಕ್ಷಿಪ್ತ ಮಾಹಿತಿ:
- 2019: ಮಂಡ್ಯ ಲೋಕಸಭಾ ಕ್ಷೇತ್ರ- 128,876 ಮತಗಳ ಅಂತರದ ಸೋಲು
- 2023- ರಾಮನಗರ ವಿಧಾನಸಭಾ ಕ್ಷೇತ್ರ- 10,715 ಮತಗಳ ಅಂತರದ ಸೋಲು
- 2024- ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ- 25,413 ಮತಗಳ ಅಂತರದ ಸೋಲು
2028 ರಲ್ಲಿ ರಾಮನಗರದಿಂದ ಮತ್ತೆ ಸ್ಪರ್ಧಿಸಲಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ವಿಜಯಲಕ್ಷ್ಮಿ ಒಲಿಯಲಿದೆಯಾ ಕಾದು ನೋಡಬೇಕಿದೆ.