Zameer Ahmed Khan
“ರಾಜ್ಯ ರಾಜಕಾರಣದಲ್ಲಿ ಈಗ ಎಲ್ಲರ ಕಣ್ಣು ದಾವಣಗೆರೆಯತ್ತ ನೆಟ್ಟಿದೆ. ದಾವಣಗೆರೆ ದಕ್ಷಿಣ ಉಪಚುನಾವಣೆಯ ಅಖಾಡದಲ್ಲಿ ಹುಟ್ಟಿಕೊಂಡಿರುವ ಆಂತರಿಕ ಭಿನ್ನಮತವು, ಈಗ ಕಾಂಗ್ರೆಸ್ ಪಕ್ಷದ ಭದ್ರಕೋಟೆಯನ್ನೇ ಅಲುಗಾಡಿಸುವ ಮುನ್ಸೂಚನೆ ನೀಡುತ್ತಿದೆ. ಸಚಿವ ಝಮೀರ್ ಅಹ್ಮದ್ ಖಾನ್ (Zameer Ahmed Khan) ಅವರ ‘ಹೊಸ ರಾಜಕೀಯ ಅಧ್ಯಾಯ’ದ ವದಂತಿಗಳು ಬರಿ ಹಾರಿಕೆಯ ಮಾತುಗಳಲ್ಲ, ಬದಲಿಗೆ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ‘ಅಹಿಂದ’ ಶಕ್ತಿಯನ್ನು ಒಗ್ಗೂಡಿಸಿ ಹೊಸ ಪ್ರಾದೇಶಿಕ ಪಕ್ಷ ಕಟ್ಟುವ ಬಲಿಷ್ಠ ತಯಾರಿ ಎಂಬ ಚರ್ಚೆಗಳು ರಾಜಕೀಯ ಗಲ್ಲಿಗಳಲ್ಲಿ ದಟ್ಟವಾಗಿ ಕೇಳಿಬರುತ್ತಿವೆ.”
ಬಿಕ್ಕಟ್ಟಿನ ಮೂಲ: ದಾವಣಗೆರೆ ಟಿಕೆಟ್ ಪಾಲಿಟಿಕ್ಸ್
ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಿತು. ಆದರೆ, ಇಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕವಾಗಿರುವುದರಿಂದ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಸಚಿವ ಝಮೀರ್ ಅಹ್ಮದ್ ಖಾನ್ ಪಟ್ಟು ಹಿಡಿದಿದ್ದರು. ಹೈಕಮಾಂಡ್ ನಿರ್ಧಾರದಿಂದ ಅತೃಪ್ತರಾದ ಜಮೀರ್ ಬಣ, ಈಗ “ಸಾಮಾಜಿಕ ನ್ಯಾಯ” ಮತ್ತು “ಸಮಾನ ಹಕ್ಕು” ಎಂಬ ಘೋಷವಾಕ್ಯದೊಂದಿಗೆ ಹೊಸ ಹಾದಿ ತುಳಿಯಲು ಮುಂದಾಗಿದೆ ಎನ್ನಲಾಗುತ್ತಿದೆ.
ಹೊಸ ಪ್ರಾದೇಶಿಕ ಪಕ್ಷ: ಅಹಿಂದ ಶಕ್ತಿ
ಒಂದು ವೇಳೆ ಝಮೀರ್ ಅಹ್ಮದ್ ಖಾನ್ ಹೊಸ ಪ್ರಾದೇಶಿಕ ಪಕ್ಷ ಕಟ್ಟಿದರೆ ಅದು ಕರ್ನಾಟಕದ 3ನೇ ಬಲಿಷ್ಠ ಶಕ್ತಿಯಾಗಿ ಹೊರಹೊಮ್ಮುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
- ಸಾಮಾಜಿಕ ನ್ಯಾಯದ ಅಜೆಂಡಾ: ಕಾಂಗ್ರೆಸ್ನಲ್ಲಿ ಕೇವಲ ಕುಟುಂಬ ರಾಜಕಾರಣಕ್ಕೆ ಮನ್ನಣೆ ಸಿಗುತ್ತಿದೆ, ಶ್ರಮಿಸಿದ ಸಮುದಾಯದ ನಾಯಕರಿಗೆ ಬೆಲೆ ಇಲ್ಲ ಎಂಬ ಆರೋಪವನ್ನು ಮುಂದಿಟ್ಟುಕೊಂಡು ಅಹಿಂದ ವರ್ಗವನ್ನು ಸೆಳೆಯುವುದು ಈ ಪಕ್ಷದ ತಂತ್ರಗಾರಿಕೆ.
- ದಾವಣಗೆರೆ ದಿಕ್ಸೂಚಿ: ದಾವಣಗೆರೆಯ ಈ ಉಪಚುನಾವಣೆ ಫಲಿತಾಂಶವು ಹೊಸ ಪಕ್ಷದ ಭವಿಷ್ಯಕ್ಕೆ ದಿಕ್ಸೂಚಿಯಾಗಲಿದೆ.
ಕಾಂಗ್ರೆಸ್ ಮುಖಂಡರ ಭವಿಷ್ಯಕ್ಕೆ ಕುತ್ತು?
ಈ ಬೆಳವಣಿಗೆಯು ಕಾಂಗ್ರೆಸ್ನ ಇತರ ಮುಸ್ಲಿಂ ನಾಯಕರಾದ ರಿಝ್ವಾನ್ ಅರ್ಷದ್ ಮತ್ತು ಸಲೀಂ ಅಹ್ಮದ್ ಅವರ ರಾಜಕೀಯ ಜೀವನಕ್ಕೆ ದೊಡ್ಡ ಸವಾಲಾಗುವ ಸಾಧ್ಯತೆಯಿದೆ.
- ರಿಝ್ವಾನ್ ಅರ್ಷದ್: ಶಿವಾಜಿನಗರದಲ್ಲಿ ಮುಸ್ಲಿಂ ಮತಗಳೇ ನಿರ್ಣಾಯಕ. ಝಮೀರ್ ಅಹ್ಮದ್ ಖಾನ್ ಅವರ ಹೊಸ ಪಕ್ಷ ಅಸ್ತಿತ್ವಕ್ಕೆ ಬಂದರೆ, ರಿಝ್ವಾನ್ ಅವರ ಸಾಂಪ್ರದಾಯಿಕ ಮತಬ್ಯಾಂಕ್ ವಿಭಜನೆಯಾಗಿ ಅವರಿಗೆ “ಹೊಗೆ” ಗ್ಯಾರಂಟಿ ಎಂಬ ಮಾತುಗಳು ಕೇಳಿಬರುತ್ತಿವೆ.
- ಸಲೀಂ ಅಹ್ಮದ್: ಚುನಾವಣಾ ರಾಜಕೀಯದ ನೇರ ಅನುಭವವಿಲ್ಲದ ಸಲೀಂ ಅಹ್ಮದ್ ಅವರು ಈಗ ಝಮೀರ್ ಮತ್ತು ಹೈಕಮಾಂಡ್ ನಡುವಿನ ರಾಜಕೀಯ ತೂಗುಯ್ಯಾಲೆಯಲ್ಲಿ ಸಿಲುಕಿದ್ದಾರೆ.
SDPI ಜೊತೆಗಿನ ‘ಒಳಸಂಚು’?
ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಎಸ್ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆಗೆ ಝಮೀರ್ ಅಹ್ಮದ್ ಖಾನ್ ಮತ್ತು ನಸೀರ್ ಅಹ್ಮದ್ ಅವರು ಗುಪ್ತವಾಗಿ ಬೆಂಬಲ ನೀಡಿದ್ದಾರೆ ಎಂಬ ಗಂಭೀರ ಆರೋಪವಿದೆ. ಈಗಾಗಲೇ ಐಬಿ (IB) ಮತ್ತು ಎಐಸಿಸಿ ಕಾರ್ಯದರ್ಶಿಗಳು ಈ ಬಗ್ಗೆ ಹೈಕಮಾಂಡ್ಗೆ ವರದಿ ಸಲ್ಲಿಸಿದ್ದು, ಸಚಿವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಭವಿಷ್ಯ ‘ಚಿಂದಿ ಚಿತ್ರಾನ್ನ’?
ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಝಮೀರ್ ಅಹ್ಮದ್ ಖಾನ್ ಅವರು ಪಕ್ಷದಿಂದ ಹೊರಬಂದರೆ ಅಥವಾ ಬಂಡಾಯ ಎದ್ದರೆ, ಮುಸ್ಲಿಂ ಮತಗಳು ಕಾಂಗ್ರೆಸ್ನಿಂದ ಸಂಪೂರ್ಣವಾಗಿ ಕೈತಪ್ಪುವ ಭೀತಿ ಇದೆ. ಇದರಿಂದ ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ಭವಿಷ್ಯ “ಚಿಂದಿ ಚಿತ್ರಾನ್ನ”ವಾಗುವುದರಲ್ಲಿ ಸಂಶಯವಿಲ್ಲ.
ಇಂತಹದೊಂದು ಸುದ್ದಿ ಹುಟ್ಟಿಕೊಳ್ಳಲು ಕಾರಣವೇನು?
ಸಚಿವ ಝಮೀರ್ ಅಹ್ಮದ್ ಖಾನ್ ಅವರು ಕಾಂಗ್ರೆಸ್ ತೊರೆದು ಹೊಸ ಪಕ್ಷ ಕಟ್ಟುತ್ತಾರೆ ಎಂಬ ವದಂತಿ ಶುರುವಾಗಲು ಮುಖ್ಯ ಕಾರಣ ದಾವಣಗೆರೆ ದಕ್ಷಿಣದ ಉಪಚುನಾವಣಾ ವಿದ್ಯಮಾನಗಳು ಮತ್ತು ಅದರ ಮುಂದುವರೆದ ನಡೆಗಳು.
ಅಂದರೆ ದಾವಣಗೆರೆ ಉಪಚುನಾವಣೆ ಮುಕ್ತಾಯದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಸೋಲಿನ ಭೀತಿ ಎದುರಾಗಿದೆ. ಇದಕ್ಕೆ ಮುಖ್ಯ ಕಾರಣ ಝಮೀರ್ ಅಹ್ಮದ್ ಖಾನ್ ಎನ್ನಲಾಗುತ್ತಿದೆ. ಏಕೆಂದರೆ ಝಮೀರ್, ಸಮರ್ಥ್ ಪರ ಬಹಿರಂಗ ಪ್ರಚಾರ ನಡೆಸಿಲ್ಲ. ಅವರ ಈ ನ್ಯೂಟ್ರಲ್ ನಿರ್ಣಯ ಮುಸ್ಲಿಂ ಮತಗಳ ಮೇಲೆ ವ್ಯತಿರಿಕ್ತ ಪ್ರಭಾವ ಬೀರಿದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿದೆ. ಇದರ ಬೆನ್ನಲ್ಲೇ ಝಮೀರ್ ಅಹ್ಮದ್ ಖಾನ್ ವಿರುದ್ಧ ಈ ಕೆಳಗಿನ ಆರೋಪಗಳು ಕೂಡ ಕೇಳಿ ಬಂದಿವೆ…
ಎಸ್ಡಿಪಿಐ ಬೆಂಬಲದ ಗಂಭೀರ ಆರೋಪ: ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿರುವ ಎಸ್ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಅವರಿಗೆ ಝಮೀರ್ ಅಹ್ಮದ್, ನಸೀರ್ ಅಹ್ಮದ್ ಮತ್ತು ಅಬ್ದುಲ್ ಜಬ್ಬಾರ್ ಅವರು ಆರ್ಥಿಕ ಸಹಾಯ ಮತ್ತು ಗುಪ್ತ ಬೆಂಬಲ ನೀಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಸುಮಾರು 10 ಕೋಟಿ ರೂ.ಗಳ ನಿಧಿಯನ್ನು ಈ ಉದ್ದೇಶಕ್ಕೆ ಬಳಸಲಾಗಿದೆ ಎಂಬ ವದಂತಿಗಳು ಕಾಂಗ್ರೆಸ್ ವಲಯದಲ್ಲೇ ಹರಿದಾಡುತ್ತಿವೆ.
ಚುನಾವಣಾ ಪ್ರಚಾರದಿಂದ ದೂರ: ದಾವಣಗೆರೆ ಚುನಾವಣಾ ಕಣದಲ್ಲಿ ಸಕ್ರಿಯರಾಗಿ ಕಾಣಿಸಿಕೊಳ್ಳಬೇಕಿದ್ದ ಝಮೀರ್, ಆರಂಭದಲ್ಲಿ ಕೇರಳ ಚುನಾವಣೆ ನೆಪವೊಡ್ಡಿ ಪ್ರಚಾರದಿಂದ ದೂರವಿದ್ದರು. ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಕೇವಲ ಹೆಸರಿಗಷ್ಟೇ ಭೇಟಿ ನೀಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮನಃಪೂರ್ವಕವಾಗಿ ತೊಡಗಿಸಿಕೊಂಡಿಲ್ಲ ಎಂದು ಹಿರಿಯ ನಾಯಕರಾದ ರಿಝ್ವಾನ್ ಅರ್ಷದ್ ಮತ್ತು ಸಲೀಂ ಅಹ್ಮದ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೈಕಮಾಂಡ್ಗೆ ಸಲ್ಲಿಕೆಯಾದ ವರದಿಗಳು: ಇಂಟೆಲಿಜೆನ್ಸ್ ಬ್ಯೂರೋ (IB) ಮತ್ತು ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಅವರು ನೀಡಿದ ವರದಿಗಳಲ್ಲಿ ಝಮೀರ್ ಅಹ್ಮದ್ ಅವರ ವಿರುದ್ಧ ‘ಪಕ್ಷವಿರೋಧಿ ಚಟುವಟಿಕೆ’ ಗಳ ಬಗ್ಗೆ ಉಲ್ಲೇಖಿಸಲಾಗಿದೆ. ಇತ್ತ ಹೈಕಮಾಂಡ್ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬಹುದು ಎಂಬ ಸುದ್ದಿ ಹುಟ್ಟಿಕೊಳ್ಳುತ್ತಿದ್ದಂತೆ, ಝಮೀರ್ ಅಹ್ಮದ್ ಖಾನ್ ಹೊಸ ರಾಜಕೀಯ ವೇದಿಕೆ ಅಥವಾ ‘ಅಹಿಂದ’ ಪಕ್ಷ ಕಟ್ಟಬಹುದು ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿವೆ.
ಸಮುದಾಯದ ನಾಯಕತ್ವದ ಸಂಘರ್ಷ: ಮುಸ್ಲಿಂ ಸಮುದಾಯದ ಮತಬ್ಯಾಂಕ್ ಮೇಲೆ ಹಿಡಿತ ಸಾಧಿಸಲು ಕಾಂಗ್ರೆಸ್ನೊಳಗಿನ ರಿಝ್ವಾನ್ ಅರ್ಷದ್ ಮತ್ತು ಝಮೀರ್ ಅಹ್ಮದ್ ಬಣಗಳ ನಡುವೆ ನಡೆಯುತ್ತಿರುವ ಶೀತಲ ಸಮರವೇ ಇಂತಹ ‘ಹೊಸ ಪಕ್ಷ’ದ ಸುದ್ದಿಗೆ ದೊಡ್ಡ ಪ್ರೇರಣೆಯಾಗಿದೆ.
‘ಕೈ’ಕಮಾಂಡ್ ಕ್ರಮ:
ಅಬ್ದುಲ್ ಜಬ್ಬಾರ್ (ಎಂಎಲ್ಸಿ): ದಾವಣಗೆರೆ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ಇವರು, ಶನಿವಾರವಷ್ಟೇ (ಏಪ್ರಿಲ್ 11, 2026) ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೈಕಮಾಂಡ್ ಸೂಚನೆಯ ಮೇರೆಗೆ ಇವರಿಂದ ರಾಜೀನಾಮೆ ಪಡೆಯಲಾಗಿದೆ ಎನ್ನಲಾಗಿದೆ.
ನಸೀರ್ ಅಹ್ಮದ್ (ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ): ಇವರೂ ಸಹ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ, ಇವರನ್ನು ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ತೆಗೆದುಹಾಕುವ ಸಾಧ್ಯತೆ ದಟ್ಟವಾಗಿದೆ.
ಕಾಂಗ್ರೆಸ್ನ ಇಬ್ಬರು ಹಿರಿಯ ನಾಯಕರುಗಳ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳುವ ಸೂಚನೆ ಸಿಗುತ್ತಿದ್ದಂತೆ ಝಮೀರ್ ಅಹ್ಮದ್ ಅವರು ಅಹಿಂದ ಪಕ್ಷ ಕಟ್ಟುತ್ತಾರೆಂಬ ಸುದ್ದಿ ಹೊರಬಿದ್ದಿದೆ. ಇಂತಹದೊಂದು ಸುದ್ದಿಯನ್ನು ಝಮೀರ್ ಅಹ್ಮದ್ ಖಾನ್ ಅವರಿಗೆ ಆಪ್ತರಾಗಿರುವ ಪತ್ರಕರ್ತ ಸೈಯ್ಯದ್ ನಝೀರ್ ಅವರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿಯೇ ಝಮೀರ್ ಅಹ್ಮದ್ ಖಾನ್ ಅವರ ಹೊಸ ಪಕ್ಷದ ಸುದ್ದಿಯು ಮಹತ್ವ ಪಡೆದುಕೊಂಡಿದೆ.
View this post on Instagram
ಸಿದ್ದರಾಮಯ್ಯ ಅವರು ಹಿಂದೆ ಅಹಿಂದ ಮೂಲಕ ಶಕ್ತಿ ಪ್ರದರ್ಶಿಸಿದಂತೆ, ಈಗ ಝಮೀರ್ ಅಹ್ಮದ್ ಖಾನ್ ಅವರು ಮುಸ್ಲಿಂ ಮತ್ತು ದಲಿತ ವರ್ಗಗಳನ್ನು ಒಗ್ಗೂಡಿಸಿ ಸ್ವಂತ ವೇದಿಕೆ ನಿರ್ಮಿಸಿಕೊಳ್ಳುವ ಹಂಬಲ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಹೈಕಮಾಂಡ್ ಒಂದು ವೇಳೆ ಝಮೀರ್ ಅಹ್ಮದ್ ಖಾನ್ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಿದರೆ ಅಥವಾ ಅಮಾನತು ಮಾಡಿದರೆ, ಅವರು ಅನಿವಾರ್ಯವಾಗಿ ಹೊಸ ಪಕ್ಷದ ಮೊರೆ ಹೋಗಬಹುದು. ಹೀಗಾಗಿ ಝಮೀರ್ ಅಹ್ಮದ್ ಖಾನ್ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ತಿಳಿಯಲು ದಾವಣಗೆರೆಯ ಚುನಾವಣೆಯ ಫಲಿತಾಂಶ ಬರುವ ತನಕ ಕಾಯಲೇಬೇಕು. ಅಂದರೆ ಮೇ 4 ರ ತನಕ ಬಳಿಕವಷ್ಟೇ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಸ್ಪಷ್ಟ ಚಿತ್ರಣ ಹೊರಬೀಳಲಿದೆ.