”ಯಾವಾಗ ಎದುರಾಳಿಯು ನಮಗಿಂತಲೂ ಪ್ರಬಲವಾಗಿ ನಮ್ಮದೇ ಅಸ್ತ್ರವನ್ನು ಬಳಸಲಾರಂಭಿಸುತ್ತಾನೋ, ಆಗ ಸಾಂಪ್ರದಾಯಿಕ ಯುದ್ಧ ತಂತ್ರಗಳು ಧೂಳೀಪಟವಾಗುತ್ತವೆ. ಕರ್ನಾಟಕದ ಸದ್ಯದ ರಾಜಕೀಯ ಸ್ಥಿತಿಯೂ ಇದೇ ಆಗಿದೆ. ಜೂನ್ 3ರಂದು ಡಿ.ಕೆ. ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ಬಿಜೆಪಿಯ ಪಾಲಿಗೆ 2028ರ ಚುನಾವಣೆಯ ಹಾದಿ ಅತ್ಯಂತ ಕಠಿಣವಾದಂತೆ ಕಾಣುತ್ತಿದೆ. ಸಿದ್ದರಾಮಯ್ಯ ಅವರ ವೈಚಾರಿಕ ನಿಲುವುಗಳು ಸದಾ ಬಿಜೆಪಿಗೆ ಧ್ರುವೀಕರಣದ ರಾಜಕಾರಣ ಮಾಡಲು ರಾಜಮಾರ್ಗ ಕಲ್ಪಿಸಿಕೊಡುತ್ತಿದ್ದವು. ಆದರೆ, ಸ್ವಾಮೀಜಿಗಳ ಆಶೀರ್ವಾದ, ನಿತ್ಯ ಪೂಜೆ ಹಾಗೂ ಅಪ್ಪಟ ಧರ್ಮನಿಷ್ಠೆಯನ್ನು ಸಾರ್ವಜನಿಕವಾಗಿಯೇ ಪ್ರದರ್ಶಿಸುವ ಡಿಕೆಶಿ ಮುಂಚೂಣಿಗೆ ಬಂದಿರುವುದು ಬಿಜೆಪಿಯ ಅಸ್ತ್ರಗಳನ್ನೆಲ್ಲ ಅಪ್ರಸ್ತುತಗೊಳಿಸಿದೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಾಂಪ್ರದಾಯಿಕ ಸಂಘರ್ಷದ ಶೈಲಿಯನ್ನೇ ಬದಲಿಸಿದೆ.”
ಸಿದ್ಧರಾಮಯ್ಯ ಮತ್ತು ಡಿಕೆಶಿ, ಇವರಿಬ್ಬರ ಸದ್ಧಾಂತಿಕ ಹಿನ್ನೆಲೆ, ವೈಯಕ್ತಿಕ ನಂಬಿಕೆ ಮತ್ತು ರಾಜಕೀಯ ಶೈಲಿಗಳ ನಡುವೆ ಆಕಾಶ-ಭೂಮಿಯಷ್ಟೇ ವ್ಯತ್ಯಾಸವಿದೆ. ಈ ವ್ಯತ್ಯಾಸವೇ ಸದ್ಯ ರಾಜ್ಯ ಬಿಜೆಪಿಯ ನಿದ್ದೆಗೆಡಿಸಿದೆ. ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿದಷ್ಟು ಸುಲಭದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಕಟ್ಟಿಹಾಕಲು ಬಿಜೆಪಿಗೆ ಸಾಧ್ಯವೇ ಇಲ್ಲ ಎಂಬ ಮಾತುಗಳು ಈಗ ರಾಜಕೀಯ ಕಾರಿಡಾರ್ನಲ್ಲಿ ಜೋರಾಗಿ ಕೇಳಿಬರುತ್ತಿವೆ. ಇದಕ್ಕೆ ಕಾರಣಗಳೂ ಅಷ್ಟೇ ತಾರ್ಕಿಕವಾಗಿವೆ.
‘ಫಿಲ್ಟರ್ ಇಲ್ಲದ’ ಸಿದ್ದರಾಮಯ್ಯ vs ‘ಅಳೆದು ತೂಗುವ’ ಡಿಕೆಶಿ
ಸಿದ್ದರಾಮಯ್ಯ ಅವರು ಮೂಲತಃ ಸಮಾಜವಾದಿ ಹಿನ್ನೆಲೆಯಿಂದ ಬಂದವರು. ಲೋಹಿಯಾವಾದ ಮತ್ತು ಪ್ರಗತಿಪರ ಚಿಂತನೆಗಳ ಪ್ರಭಾವ ಇವರ ಮೇಲಿದೆ. ಸಾರ್ವಜನಿಕ ಜೀವನದಲ್ಲಿ ಸಿದ್ದರಾಮಯ್ಯ ಅವರಿಗೆ ಯಾವುದೇ ‘ಫಿಲ್ಟರ್’ ಇಲ್ಲ. ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ, ಮುಲಾಜಿಲ್ಲದೆ ಹೇಳಿಬಿಡುವುದು ಅವರ ಶೈಲಿ. “ಮೀನು ತಿಂದು ಮಂದಿರಕ್ಕೆ ಹೋದರೆ ಏನು ತಪ್ಪು?” ಎಂದು ಕೇಳುವ ಧಾಷ್ಟ್ರ್ಯವಾಗಲಿ, ಕೇಸರಿ ಶಾಲನ್ನು ಸಾರ್ವಜನಿಕವಾಗಿ ನಿರಾಕರಿಸುವ ನಿಷ್ಟುರತೆಯಾಗಲಿ ಸಿದ್ದರಾಮಯ್ಯ ಅವರಿಗೆ ಮಾತ್ರ ಸಾಧ್ಯ. ಆದರೆ, ಇಂತಹ ನಡೆಗಳು ವಿರೋಧ ಪಕ್ಷವಾದ ಬಿಜೆಪಿಗೆ ಸದಾ ಸಿದ್ದರಾಮಯ್ಯ ವಿರುದ್ಧ ಮುಗಿಬೀಳಲು ಸಿದ್ಧ ಆಹಾರವನ್ನು ಒದಗಿಸುತ್ತವೆ.
ಆದರೆ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಶೈಲಿ ಸಂಪೂರ್ಣ ಭಿನ್ನ. ಅವರು ಪಕ್ಕಾ ಪ್ರಾಯೋಗಿಕ ರಾಜಕಾರಣಿ (Pragmatic Politician). ಯಾವುದೇ ಸಾರ್ವಜನಿಕ ಹೇಳಿಕೆ ನೀಡುವ ಮುನ್ನ ಅದರ ರಾಜಕೀಯ ಲಾಭ-ನಷ್ಟಗಳನ್ನು ಅಳೆದು ತೂಗುವ ಚಾಣಾಕ್ಷತನ ಅವರಿಗಿದೆ. ಬಹುಸಂಖ್ಯಾತ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುವಂತಹ ಯಾವುದೇ ಹೇಳಿಕೆಯನ್ನು ಅವರು ಎಂದಿಗೂ ನೀಡುವುದಿಲ್ಲ.
ಬಿಜೆಪಿಯ ‘ಹಿಂದುತ್ವ’ ಅಸ್ತ್ರಕ್ಕೆ ಡಿಕೆಶಿ ಎಂಬ ಬ್ರೇಕ್:
ಬಿಜೆಪಿಯ ಪ್ರಮುಖ ರಾಜಕೀಯ ಅಸ್ತ್ರವೇ ‘ಹಿಂದುತ್ವ’ ಮತ್ತು ‘ಮುಸ್ಲಿಂ ಓಲೈಕೆ’ಯ ಆರೋಪ. ಸಿದ್ದರಾಮಯ್ಯ ಅವರ ಅಹಿಂದ (AHINDA) ರಾಜಕಾರಣವನ್ನು ‘ಹಿಂದೂ ವಿರೋಧಿ’ ಎಂದು ಬಿಂಬಿಸುವುದು ಬಿಜೆಪಿಗೆ ಸುಲಭವಾಗಿತ್ತು. ಆದರೆ ಡಿಕೆಶಿ ವಿಷಯದಲ್ಲಿ ಈ ಕಾರ್ಡ್ ಸಂಪೂರ್ಣ ನಿಷ್ಪ್ರಯೋಜಕವಾಗುತ್ತದೆ.
ಅಪ್ಪಟ ಧಾರ್ಮಿಕತೆಯ ನಡೆ:
ಡಿಕೆಶಿ ಧಾರ್ಮಿಕತೆ ಮತ್ತು ಆಧ್ಯಾತ್ಮಿಕ ನಂಬಿಕೆಗಳನ್ನು ಸಾರ್ವಜನಿಕವಾಗಿಯೇ ಪ್ರದರ್ಶಿಸುವ ನಾಯಕ. ಮುಖ್ಯಮಂತ್ರಿ ಕಚೇರಿ ಪ್ರವೇಶಿಸುವ ಮುನ್ನ ಬಾಗಿಲಿಗೆ ನಮಸ್ಕರಿಸಿ, ಪೂಜೆ ನೆರವೇರಿಸಿ ಒಳಹೋಗುವ ಬಲವಾದ ಧರ್ಮನಿಷ್ಠೆ ಅವರಲ್ಲಿದೆ. ಪ್ರಮಾಣವಚನಕ್ಕೆ 55 ಸ್ವಾಮೀಜಿಗಳನ್ನು ಆಹ್ವಾನಿಸಿದ್ದೇ ಅವರ ಧಾರ್ಮಿಕ ನಂಟು ಎಂತಹುದ್ದು ಎಂಬುದಕ್ಕೆ ಸಾಕ್ಷಿ.
ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಉತ್ತರ ಪ್ರದೇಶದ ಕುಂಭಮೇಳದ ಘಟನೆ. ಅಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಅಲ್ಲಿನ ಕಾಲ್ತುಳಿತ ಮತ್ತು ಯೋಗಿ ಆದಿತ್ಯನಾಥ್ ಸರ್ಕಾರದ ಅವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ, ಡಿಕೆಶಿ ತಮ್ಮ ಪಕ್ಷದ ನಾಯಕರ ರಾಜಕೀಯ ನಿಲುವುಗಳಿಗಿಂತ ತಮ್ಮ ಧಾರ್ಮಿಕ ನಂಬಿಕೆಗೆ ಆದ್ಯತೆ ನೀಡಿ, ಕುಟುಂಬ ಸಮೇತ ಕುಂಭಮೇಳಕ್ಕೆ ತೆರಳಿ ಗಂಗೆಯಲ್ಲಿ ಮುಳುಗೆದ್ದು ಬಂದಿದ್ದರು. ಇಂತಹ ಅಪ್ಪಟ ಧಾರ್ಮಿಕ ವ್ಯಕ್ತಿಯನ್ನು “ಹಿಂದೂ ವಿರೋಧಿ” ಎಂದು ಕರೆಯಲು ಬಿಜೆಪಿಗೆ ಯಾವುದೇ ನೈತಿಕ ನೆಲೆ ಸಿಗುವುದಿಲ್ಲ.
ಬದಲಾಗಬೇಕಿದೆ ಬಿಜೆಪಿಯ ರಾಜಕೀಯ ತಂತ್ರಗಾರಿಕೆ:
ರಾಜ್ಯದಲ್ಲಿ ಸಿದ್ದರಾಮಯ್ಯ ಅವರೇ ಇನ್ನೆರಡು ವರ್ಷ ಮುಖ್ಯಮಂತ್ರಿಯಾಗಿದ್ದರೆ ಬಿಜೆಪಿಗೆ ಧ್ರುವೀಕರಣದ ರಾಜಕಾರಣ ಮಾಡಲು ಸುಲಭವಾದ ಅವಕಾಶವಿರುತ್ತಿತ್ತು. ಆದರೆ, ಕಾಂಗ್ರೆಸ್ನಲ್ಲಿ ಡಿಕೆಶಿ ಅವರ ಕೈ ಮೇಲಾಗುತ್ತಿದ್ದಂತೆ ಬಿಜೆಪಿಯ ಪಾಲಿಗೆ ಆ ಬಾಗಿಲು ಬಹುತೇಕ ಮುಚ್ಚಿದಂತಾಗಿದೆ.
ಭಾವನಾತ್ಮಕತೆಯಿಂದ ಆಡಳಿತಾತ್ಮಕತೆಯೆಡೆಗೆ:
ಇನ್ನು ಮುಂದೆ ಬಿಜೆಪಿಗೆ ಕೇವಲ ಧರ್ಮ, ಹಿಂದುತ್ವದ ಹೆಸರಿನಲ್ಲಿ ಡಿಕೆಶಿಯನ್ನು ಎದುರಿಸಲು ಸಾಧ್ಯವಿಲ್ಲ. ಬದಲಿಗೆ ಅಭಿವೃದ್ಧಿ, ಭ್ರಷ್ಟಾಚಾರ, ಮತ್ತು ಆಡಳಿತ ವೈಫಲ್ಯಗಳಂತಹ ನೈಜ ವಿಷಯಗಳನ್ನಿಟ್ಟುಕೊಂಡು ಹೋರಾಡಬೇಕಾಗುತ್ತದೆ.
ಸಂಘಟನಾತ್ಮಕ ಸವಾಲು:
ಡಿಕೆಶಿ ಕೇವಲ ಧಾರ್ಮಿಕ ನಾಯಕರಲ್ಲ, ಬದಲಿಗೆ ಕಾಂಗ್ರೆಸ್ನ ಅತ್ಯಂತ ಶಕ್ತಿಶಾಲಿ ಸಂಘಟನಾ ಚತುರ. ಅವರ ಚುನಾವಣಾ ತಂತ್ರಗಳನ್ನು ಎದುರಿಸಲು ಬಿಜೆಪಿಯೂ ತನ್ನ ಸಾಂಪ್ರದಾಯಿಕ ಶೈಲಿಯನ್ನು ಬದಲಾಯಿಸಿಕೊಳ್ಳಬೇಕಿದೆ.
2028ರ ಚುನಾವಣೆಯ ಮೇಲೆ ಇದರ ಪ್ರಭಾವವೇನು?
ಡಿಕೆಶಿ ಅವರ ಈ ‘ಧಾರ್ಮಿಕ ನಂಬಿಕೆ’ಯೇ ಈಗ ಬಿಜೆಪಿ ಮುಂದಿರುವ ದೊಡ್ಡ ಸವಾಲು. ಅದರಲ್ಲೂ ಹಿಂದೂ ಧರ್ಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುವ ಬಿಜೆಪಿಗರಿಗೆ ಡಿಕೆಶಿ ಮುಂಬರುವ ದಿನಗಳಲ್ಲಿ ಸವಾಲೆಸೆಯುವುದರಲ್ಲಿ ಡೌಟೇ ಇಲ್ಲ. ಹೀಗಾಗಿಯೇ ಬಿಜೆಪಿಯ ರಾಜ್ಯ ನಾಯಕತ್ವ ಮತ್ತು ರಾಜ್ಯಾಧ್ಯಕ್ಷರ ಬದಲಾವಣೆಯ ಚರ್ಚೆಗಳು ಮುಂಚೂಣಿಗೆ ಬಂದಿವೆ.
ಇತ್ತ ಡಿಕೆಶಿ ಮುಂದಾಳತ್ವದಲ್ಲಿ ಕಾಂಗ್ರೆಸ್ ಮುಂದಿನ ಎರಡು ವರ್ಷಗಳಲ್ಲಿ ಮುಂಬರುವ ಚುನಾವಣೆಗೆ ಸಿದ್ಧತೆ ನಡೆಸಲಿದ್ದಾರೆ. ಅದರ ಮುನ್ಸೂಚನೆಯನ್ನು ಈಗಾಗಲೇ ಭಾರತ್ ಜೊಡೊ ಯುವಕರ ಸಂಘ ಸ್ಥಾಪಿಸಲು ಯೂತ್ ಕಾಂಗ್ರೆಸ್ಗೆ ಸೂಚಿಸಿರುವುದು.
ಇದರ ಜೊತೆಗೆ ಮತ್ತಷ್ಟು ಯೋಜನೆಗಳನ್ನು ಕೂಡ ಹಾಕಿಕೊಂಡಿದ್ದಾರೆ. ಇವೆಲ್ಲವೂ ಅಸ್ತಿತ್ವಕ್ಕೆ ಬಂದರೆ 2028ರಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳುವ ಹಾದಿ ಅತ್ಯಂತ ಕಠಿಣವಾಗಲಿದೆ ಎಂಬುದನ್ನು ಬಿಜೆಪಿ ಹೈಕಮಾಂಡ್ ಕೂಡ ಅರಿತಂತಿದೆ.
ಒಟ್ಟಾರೆಯಾಗಿ ಹೇಳುವುದಾದರೆ ರಾಜಕಾರಣದಲ್ಲಿ ಶತ್ರುವಿನ ಬಲಹೀನತೆಯೇ ತನ್ನ ಬಲ ಎಂದು ನಂಬುವ ಪಕ್ಷಗಳಿಗೆ, ಶತ್ರು ಯಾವುದೇ ಬಲಹೀನತೆ ಇಲ್ಲದೆ ಮೈದಾನಕ್ಕಿಳಿದಾಗ ತಂತ್ರ ಬದಲಾಯಿಸುವುದು ಅನಿವಾರ್ಯವಾಗುತ್ತದೆ.
ಸಿದ್ದರಾಮಯ್ಯ ಅವರನ್ನು ಸಿದ್ಧಾಂತದ ಹೆಸರಿನಲ್ಲಿ ಕಟ್ಟಿಹಾಕುತ್ತಿದ್ದ ಬಿಜೆಪಿಗೆ, ಡಿಕೆಶಿ ಅವರ ಧಾರ್ಮಿಕ ಮತ್ತು ಪ್ರಾಯೋಗಿಕ ರಾಜಕಾರಣ ದೊಡ್ಡ ಸವಾಲಾಗಿದೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಡಿಕೆಶಿಗೆ ಮಣೆ ಹಾಕಿರುವ ಕಾಂಗ್ರೆಸ್ನ ಈ ಆಂತರಿಕ ತಂತ್ರಗಾರಿಕೆ, ಸದ್ಯಕ್ಕೆ ವಿರೋಧ ಪಕ್ಷವಾದ ಬಿಜೆಪಿಗೆ ಅರಗಿಸಿಕೊಳ್ಳಲಾಗದ ಕಹಿ ಗುಳಿಗೆಯಾಗಿ ಪರಿಣಮಿಸಿರುವುದಂತೂ ಸತ್ಯ.