Mohammed Nalpad
ಬೆಂಗಳೂರಿನ ಐಷಾರಾಮಿ ಬದುಕು, ಹೈಟೆಕ್ ಹಗರಣಗಳು ಮತ್ತು ಪ್ರಭಾವಿ ರಾಜಕಾರಣಿಗಳ ಮಕ್ಕಳ ನಂಟು—ಇವೆಲ್ಲವೂ ಸೇರಿದರೆ ಒಂದು ಅಪ್ಪಟ ಸಸ್ಪೆನ್ಸ್ ಥ್ರಿಲ್ಲರ್ ಸಿನೆಮಾದಂತೆ ಕಾಣುತ್ತದೆ. ಆದರೆ ಇದು ಕಲ್ಪನೆಯಲ್ಲ, ರಾಜಧಾನಿಯ ಜಯನಗರದ ಬೀದಿಗಳಲ್ಲಿ ಜಾರಿ ನಿರ್ದೇಶನಾಲಯ (ED) ನಡೆಸುತ್ತಿರುವ ಅಸಲಿ ಬೇಟೆ!
ಏಪ್ರಿಲ್ 21ರ ಮುಂಜಾನೆ. ಜಯನಗರದ ಒಂದು ನಿವಾಸದ ಮುಂದೆ ಇಡಿ ಅಧಿಕಾರಿಗಳ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಒಳಗಿರುವುದು ಬಿಟ್ ಕಾಯಿನ್ ಲೋಕದ ಮಾಂತ್ರಿಕ ಎನ್ನಲಾದ ‘ಕಿಂಗ್ ಪಿನ್’ ಶ್ರೀಕಿ. ಸೋಮವಾರದಿಂದಲೇ ಆರಂಭವಾದ ಈ ಶೋಧ ಕಾರ್ಯ ಸತತ ಎರಡನೇ ದಿನವೂ ಮುಂದುವರಿದಿದೆ. ಮನೆಯ ಪ್ರತಿಯೊಂದು ಮೂಲೆಯನ್ನು ಜಾಲಾಡುತ್ತಿರುವ ಅಧಿಕಾರಿಗಳಿಗೆ ಸಿಗುತ್ತಿರುವ ಸುಳಿವುಗಳು ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸುವಂತಿವೆ.
ಶಾಸಕನ ಪುತ್ರ ಮತ್ತು 4.65 ಕೋಟಿಯ ನಂಟು!
ಈ ಹಗರಣ ಕೇವಲ ಕಂಪ್ಯೂಟರ್ ಸ್ಕ್ರೀನ್ಗಳಿಗೆ ಸೀಮಿತವಾಗಿಲ್ಲ. ಇದರ ತನಿಖೆಯ ಹಾದಿ ಈಗ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಅವರ ಮನೆ ಬಾಗಿಲಿಗೂ ಬಂದು ನಿಂತಿದೆ. ಶ್ರೀಕಿ ಮತ್ತು ನಲಪಾಡ್ ನಡುವೆ ನಡೆದಿದೆ ಎನ್ನಲಾದ 4.65 ಕೋಟಿ ರೂಪಾಯಿಗಳ ವಿಚಿತ್ರ ಆರ್ಥಿಕ ವಹಿವಾಟು ಈಗ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಶ್ರೀಕಿಯ ರಾಯಲ್ ಜೀವನಶೈಲಿಗೆ ಹಣ ಹರಿಸಿದ್ದು ಯಾರು? ಎಂಬ ಪ್ರಶ್ನೆಗೆ ಉತ್ತರವಾಗಿ ಇಡಿ ಸಾಕ್ಷ್ಯಗಳನ್ನು ಹೆಕ್ಕಿ ತೆಗೆಯುತ್ತಿದೆ.
ಪೋರ್ಷೆ ಕಾರಿನ ಸೀಟು ಸುಟ್ಟು ದರ್ಪ!
ಕಥೆಯ ಅತ್ಯಂತ ವಿಲಕ್ಷಣ ತಿರುವು ಇರುವುದು ಲಾವೆಲ್ಲೆ ರಸ್ತೆಯ ಒಂದು ಸೆಕೆಂಡ್ ಹ್ಯಾಂಡ್ ಕಾರು ಶೋರೂಂನಲ್ಲಿ. ನಲಪಾಡ್, ಶ್ರೀಕಿ ಮತ್ತು ಡಿಜಿಪಿ ಪುತ್ರ ರಿಷಬ್ ಒಟ್ಟಾಗಿ 57 ಲಕ್ಷ ರೂಪಾಯಿ ನೀಡಿ ಐಷಾರಾಮಿ ‘ಪೋರ್ಷೆ’ ಕಾರನ್ನು ಖರೀದಿಸಿದ್ದರು.
ಆದರೆ ಅಲ್ಲಿ ನಡೆದದ್ದೇ ಬೇರೆ! ಶ್ರೀಕಿ ಆ ಬೆಲೆಬಾಳುವ ಕಾರನ್ನು ಕೇವಲ ವಾಹನವಾಗಿ ನೋಡಲಿಲ್ಲ, ಬದಲಿಗೆ ಒಂದು ‘ಆಷ್ಟ್ರೇ’ ಆಗಿ ಬಳಸಿದ್ದ. ಇದಕ್ಕೆ ಮುಖ್ಯ ಕಾರಣ ಪೋರ್ಷೆ ಕಾರನ್ನು ಟೆಸ್ಟ್ ಡ್ರೈವ್ ಮಾಡುವಾಗ ಶ್ರೀಕಿ ಕೈಯಲ್ಲಿ ಸಿಗರೇಟ್ ಇತ್ತು. ಆದರೆ ಕಾರಿನಲ್ಲಿ ಕೂತು ಸಿಗರೇಟ್ ಸೇದುವಂತಿಲ್ಲ ಎಂದು ಶೋರೂಂ ಸಿಬ್ಬಂದಿ ನಿರಾಕರಿಸಿದ್ದ.
ಈ ವೇಳೆ ಶ್ರೀಕಿ ಹಾಗೂ ಶೋರೂಂ ಸಿಬ್ಬಂದಿ ನಡುವೆ ಜಗಳವಾಗಿತ್ತು. ಈ ಜಗಳದ ನಂತರ ಅದೇ ಕಾರನ್ನು ಶ್ರೀಕಿ 57 ಲಕ್ಷ ರೂಪಾಯಿ ನೀಡಿ ಖರೀದಿಸಿದ್ದ.
ಕಾರು ಖರೀದಿಸಿದ ಬಳಿಕ ಶ್ರೀಕಿ ಸಿಗರೇಟ್ ಸೇದುತ್ತಾ ಕಾರಿನ ಸೀಟಿಗೆ ಬೆಂಕಿ ಹಚ್ಚಿದ್ದ. ಈ “ರಿಚ್ ಕಿಡ್ಸ್” ಗ್ಯಾಂಗ್ನ ಉದ್ಧಟತನ ಕಂಡು ಶೋರೂಂ ಸಿಬ್ಬಂದಿಯೇ ಬೆಚ್ಚಿಬಿದ್ದಿದ್ದರು. ಬಳಿಕ ಅದೇ ಕಾರನ್ನು 10 ಲಕ್ಷ ರೂಪಾಯಿ ನಷ್ಟಕ್ಕೆ ಅಂದರೆ 47 ಲಕ್ಷಕ್ಕೆ ಅದೇ ಕಾರ್ ಶೋರೂಂಗೆ ವಾಪಸ್ ಮಾರಾಟ ಮಾಡಿದ್ದರು.
ಕಾರು ಖರೀದಿ, ಅದೇ ಶೋರೂಂಗೆ ಮಾರಾಟ… ಹೀಗೆ ಈ ಎಲ್ಲಾ ಹಣಕಾಸು ವ್ಯವಹಾರವನ್ನು ನಲಪಾಡ್ ಮತ್ತು ರಿಷಬ್ ನಿರ್ವಹಿಸಿದ್ದರು. ಇದರ ಬೆನ್ನಲ್ಲೇ ಈ ವ್ಯವಹಾರದ ಹಿಂದೆ ಕಪ್ಪು ಹಣ ಬಿಳಿ ಮಾಡುವ ತಂತ್ರವಿತ್ತೇ ಎಂಬ ಅನುಮಾನ ಕೂಡ ಹುಟ್ಟಿಕೊಂಡಿತ್ತು.
ಮಣಿಯದ ಮಾಸ್ಟರ್ ಮೈಂಡ್!
ಕಾರು ಖರೀದಿಗೆ ಸಂಬಂಧಿಸಿದಂತೆ 2024ರಲ್ಲಿ ಸಿಐಡಿ ಎಸ್ಐಟಿ ತಂಡ ಮೊಹಮ್ಮದ್ ನಲಪಾಡ್ ಮತ್ತು ರಿಷಬ್ ಅವರನ್ನು ವಿಚಾರಣೆ ನಡೆಸಿತ್ತು. ಶ್ರೀಕಿಯ ಈ ಹಣಕಾಸು ವ್ಯವಹಾರಕ್ಕೆ ನಲಪಾಡ್ ಸಹಕರಿಸಿದ್ದರಿಂದ ಎಂಎಲ್ಎ ಪುತ್ರನಿಗೆ ಸಂಕಷ್ಟ ಎದುರಾಗಿತ್ತು.
ಆದರೆ ಇಷ್ಟೆಲ್ಲಾ ನಡೆಯುತ್ತಿದ್ದರೂ, ಕಿಂಗ್ ಪಿನ್ ಶ್ರೀಕಿ ಮಾತ್ರ ಮೌನಕ್ಕೆ ಶರಣಾಗಿದ್ದ. ಇಡಿ ಅಧಿಕಾರಿಗಳ ತೀಕ್ಷ್ಣ ಪ್ರಶ್ನೆಗಳಿಗೆ ಆತ ಉತ್ತರಿಸುತ್ತಿರಲಿಲ್ಲ. ಇಂದು ಆತನನ್ನು ಬ್ಯಾಂಕ್ಗೆ ಕರೆದೊಯ್ದು, ಡಿಜಿಟಲ್ ಪುರಾವೆಗಳನ್ನು ಎದುರಿಟ್ಟು ವಿಚಾರಣೆ ನಡೆಸಲು ಇಡಿ ಸಜ್ಜಾಗಿದೆ.
12 ಕಡೆಗಳಲ್ಲಿ ದಾಳಿ!
ಏಪ್ರಿಲ್ 20 ಮತ್ತು 21, 2026ರಂದು ಜಾರಿ ನಿರ್ದೇಶನಾಲಯ (ED) ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಬೆಂಗಳೂರಿನ ಮೆಗ್ರಾತ್ ರಸ್ತೆಯಲ್ಲಿರುವ ಶಾಸಕ ಎನ್.ಎ. ಹ್ಯಾರಿಸ್ ನಿವಾಸ, ಅವರ ಮಕ್ಕಳಾದ ಮೊಹಮ್ಮದ್ ನಲಪಾಡ್ ಮತ್ತು ಉಮರ್ ಫಾರೂಕ್ ನಲಪಾಡ್ ಮನೆಗಳು ಸೇರಿದಂತೆ ಒಟ್ಟು 12 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಈ ದಾಳಿಯು 2016-17ರ ಹಳೆಯ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿ ಈ ಕ್ರಮ ಕೈಗೊಳ್ಳಲಾಗಿದೆ.
ನಲಪಾಡ್ಗೆ 4.5 ಕೋಟಿಯ ಉರುಳು?
ತನಿಖೆಯಲ್ಲಿ ಅಧಿಕಾರಿಗಳಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಕಿಂಗ್ ಪಿನ್ ಶ್ರೀಕಿ ಮತ್ತು ನಲಪಾಡ್ ನಡುವೆ 4.5 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಆರ್ಥಿಕ ವಹಿವಾಟು ನಡೆದಿದೆ. ಶ್ರೀಕಿ ಕದ್ದ ಬಿಟ್ ಕಾಯಿನ್ಗಳನ್ನು ಮಾರಿ ಗಳಿಸಿದ ಹಣದ ಮುಖ್ಯ ಫಲಾನುಭವಿಗಳು ನಲಪಾಡ್ ಸೋದರರು ಎಂದು ಇಡಿ ಗಂಭೀರವಾಗಿ ಶಂಕಿಸಿದೆ. ಶ್ರೀಕಿಯ ಐಷಾರಾಮಿ ಕಾರಿನ ಬಿಲ್ಗಳನ್ನು ಸಹ ನಲಪಾಡ್ ಪಾವತಿಸಿದ್ದರು ಎಂಬ ಹೊಸ ಸುಳಿವು ಸಿಕ್ಕಿರುವುದು ಪ್ರಕರಣಕ್ಕೆ ದೊಡ್ಡ ತಿರುವು ನೀಡಿದೆ.
ಡಿಜಿಟಲ್ ಪುರಾವೆಗಳ ಸವಾಲು
ಅಧಿಕಾರಿಗಳು ಶ್ರೀಕಿಯ ಲ್ಯಾಪ್ಟಾಪ್, ಮೊಬೈಲ್ ಫೋನ್ಗಳು ಮತ್ತು ವಾಟ್ಸಾಪ್ ಕರೆಗಳ ದಾಖಲೆಗಳನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ. ಶ್ರೀಕಿ ಜಾಗತಿಕ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿ ಕ್ರಿಪ್ಟೋ ಆಸ್ತಿಗಳನ್ನು ಕದ್ದಿದ್ದ ಎಂದು ಹೇಳಲಾಗುತ್ತಿದ್ದು, ಆ ಹಣವನ್ನು ಬ್ಯಾಂಕ್ ಖಾತೆಗಳ ಮೂಲಕ ಹೇಗೆ ‘ಲೇಯರಿಂಗ್’ ಮಾಡಲಾಗಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.
ರಾಜಕೀಯ ಸಂಘರ್ಷ!!!
ಈ ದಾಳಿಯು ಕರ್ನಾಟಕ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಬಿಜೆಪಿ ನಾಯಕರು ಇದು ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಸಾಕ್ಷಿ ಎನ್ನುತ್ತಿದ್ದರೆ, ಡಿ.ಕೆ. ಶಿವಕುಮಾರ್ ಮತ್ತು ಪ್ರಿಯಾಂಕ್ ಖರ್ಗೆಯಂತಹ ಕಾಂಗ್ರೆಸ್ ನಾಯಕರು ಇದು ರಾಜಕೀಯ ಪ್ರೇರಿತ ಸೇಡಿನ ಕ್ರಮ ಎಂದು ವಾಗ್ದಾಳಿ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್: ರೂಟ್ ಕೆನಾಲ್ ಸಂಪೂರ್ಣ ಉಚಿತ!
ಸದ್ಯ ಕಿಂಗ್ ಪಿನ್ ಶ್ರೀಕಿಯ ಬಾಯಿ ಬಿಡಿಸಲು ಇಡಿ ಅಧಿಕಾರಿಗಳು ಈಗ ಹರಸಾಹಸ ಪಡುತ್ತಿದ್ದಾರೆ. ಆತನ ಮನೆಯಲ್ಲೇ ತನಿಖೆ ಮುಂದುವರಿದಿದ್ದು, ಈ “ಡಿಜಿಟಲ್ ಕಳ್ಳ”ನ ರಹಸ್ಯಗಳು ಹೊರಬಂದರೆ ರಾಜ್ಯದ ಹಲವು ಪ್ರಭಾವಿಗಳಿಗೆ ಸಂಕಷ್ಟ ತಪ್ಪಿದ್ದಲ್ಲ!