Darshan - Pavithra
ಸ್ಯಾಂಡಲ್ವುಡ್ ನಟ ದರ್ಶನ್ ತೂಗುದೀಪ್ ಹಾಗೂ ಪವಿತ್ರಾ ಗೌಡ ಪ್ರಮುಖ ಆರೋಪಿಗಳಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣ ದಿನಕ್ಕೊಂದು ಸ್ಫೋಟಕ ತಿರುವು ಪಡೆಯುತ್ತಿದೆ. ಸದ್ಯ ಇಡೀ ಪ್ರಕರಣದಲ್ಲಿ ಅತ್ಯಂತ ಪ್ರಮುಖ ಬೆಳವಣಿಗೆಯೊಂದರಲ್ಲಿ, ದರ್ಶನ್ ಅವರ ಆಪ್ತ ಗೆಳೆಯ ಹಾಗೂ ಪ್ರಕರಣದ 14ನೇ ಆರೋಪಿ (A-14) ಪ್ರದೋಷ್ ನ್ಯಾಯಾಲಯದ ಮುಂದೆ ‘ಮಾಫಿ ಸಾಕ್ಷಿ’ (Approver) ಆಗಲು ಮುಂದಾಗಿದ್ದಾನೆ.
ಈ ಸಂಬಂಧ ಪ್ರದೋಷ್ ಸಲ್ಲಿಸಿರುವ 11 ಪುಟಗಳ ಸುದೀರ್ಘ ಹಾಗೂ ಸ್ಫೋಟಕ ಅರ್ಜಿ ಇದೀಗ ದರ್ಶನ್ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದ್ದು, ನಟನ ಪಾಲಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಪ್ರದೋಷ್ ನಡೆಸಿರುವ ಈ ದಿಢೀರ್ ನಡೆ, ದರ್ಶನ್ ಅವರ ಕಾನೂನು ಹೋರಾಟದ ಹಾದಿಯನ್ನೇ ಸಂಪೂರ್ಣವಾಗಿ ಬದಲಾಯಿಸುವ ಹಾಗೂ ಪ್ರಕರಣಕ್ಕೆ ಹೊಸದೊಂದು ದಿಕ್ಕು ನೀಡುವ ಮುನ್ಸೂಚನೆ ನೀಡಿದೆ. ಪ್ರದೋಷ್ ಸಲ್ಲಿಸಿರುವ ಅರ್ಜಿಯಲ್ಲಿರುವ 3 ಪ್ರಮುಖ ಸ್ಫೋಟಕ ಸತ್ಯಗಳು ಈ ಕೆಳಗಿನಂತಿದೆ….
ಭೀಕರ ಹಲ್ಲೆ ಕಣ್ಣಾರೆ ಕಂಡಿರುವೆ!
ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿಗೆ ಆಹಾರ ಮತ್ತು ನೀರು ನೀಡಿದ ಬಳಿಕವೂ ದರ್ಶನ್ ಅಮಾನವೀಯವಾಗಿ ವರ್ತಿಸಿದ್ದರು. ರೇಣುಕಾಸ್ವಾಮಿಯ ಕುತ್ತಿಗೆ ಹಾಗೂ ಎದೆಯ ಭಾಗಕ್ಕೆ ದರ್ಶನ್ ಬಲವಾಗಿ ಒದ್ದು ಕೆಳಗೆ ಕೆಡವಿದ್ದರು. ನಂತರ ಆತನ ಎದೆಯ ಮೇಲೆ ಎರಡೂ ಕಾಲುಗಳನ್ನಿಟ್ಟು ತುಳಿದಿದ್ದರು ಎಂದು ಪ್ರದೋಷ್ ತಾನು ಕಣ್ಣಾರೆ ಕಂಡ ದೃಶ್ಯವನ್ನು ಅರ್ಜಿಯಲ್ಲಿ ಬಿಚ್ಚಿಟ್ಟಿದ್ದಾನೆ. ತಾನು ದರ್ಶನ್ ಅವರನ್ನು ತಡೆಯಲು ಹೋದರೂ ಅವರು ಕೇಳಲಿಲ್ಲ ಎಂದು ಹೇಳಿಕೊಂಡಿದ್ದಾನೆ.
‘ನಾನೇ ಶೂಟ್ ಮಾಡಿಕೊಂಡು ಸಾಯ್ತೇನೆ’!
ರೇಣುಕಾಸ್ವಾಮಿ ಶೆಡ್ನಲ್ಲೇ ಮೃತಪಟ್ಟ ತಕ್ಷಣ ದರ್ಶನ್ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಪ್ರಕರಣವನ್ನು ಮುಚ್ಚಿಹಾಕಲು ತನಗೆ ಸಹಕರಿಸುವಂತೆ ಪ್ರದೋಷ್ಗೆ ಒತ್ತಡ ಹೇರಿದ್ದರು. “ಒಂದು ವೇಳೆ ನೀನು ನನಗೆ ಸಾಥ್ ನೀಡದಿದ್ದರೆ, ನನ್ನ ಬಳಿ ಇರುವ ಗನ್ನಿಂದ ನಾನೇ ಶೂಟ್ ಮಾಡಿಕೊಂಡು ಸತ್ತುಹೋಗುತ್ತೇನೆ” ಎಂದು ದರ್ಶನ್ ತನಗೆ ಆತ್ಮಹತ್ಯೆಯ ಬೆದರಿಕೆ ಹಾಕಿ ಬ್ಲ್ಯಾಕ್ಮೇಲ್ ಮಾಡಿದ್ದರು ಎಂದು ಪ್ರದೋಷ್ ಉಲ್ಲೇಖಿಸಿದ್ದಾನೆ.
ಡಮ್ಮಿ ಆರೋಪಿಗಳ ಸರೆಂಡರ್ ಪ್ಲಾನ್!
ಕೊಲೆಯನ್ನು ಮುಚ್ಚಿಹಾಕಲು ದರ್ಶನ್ ತಮ್ಮ ಮನೆಯಿಂದ ಹಣದ ಬ್ಯಾಗ್ ತಂದು ದೊಡ್ಡ ಸಂಚು ರೂಪಿಸಿದ್ದರು. ಪೊಲೀಸರ ದಾರಿ ತಪ್ಪಿಸಲು ಆರ್ಥಿಕ ವ್ಯವಹಾರದ ಜಗಳದಲ್ಲಿ ಕೊಲೆ ನಡೆದಿದೆ ಎಂದು ಕಥೆ ಕಟ್ಟಿ, ಡಮ್ಮಿ ಆರೋಪಿಗಳಾದ ರಾಘವೇಂದ್ರ, ಕಾರ್ತಿಕ್ ಮತ್ತು ನಿಖಿಲ್ನನ್ನು ಪೊಲೀಸರ ಮುಂದೆ ಶರಣಾಗಿಸಲು ಪ್ಲಾನ್ ಮಾಡಲಾಗಿತ್ತು. ಇದಕ್ಕಾಗಿ ನಾಗರಾಜ್ಗೆ 5 ಲಕ್ಷ ರೂ. ಹಾಗೂ ವಿನಯ್ಗೆ 10 ಲಕ್ಷ ರೂ. ಹಣದ ಆಮಿಷ ಒಡ್ಡಲಾಗಿತ್ತು ಎಂಬ ಸತ್ಯವನ್ನು ಪ್ರದೋಷ್ ಒಪ್ಪಿಕೊಂಡಿದ್ದಾನೆ.
ದರ್ಶನ್ ಪಾಳಯದಲ್ಲಿ ತಲ್ಲಣ!
ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸುತ್ತಿದ್ದಂತೆ, ಈಗಾಗಲೇ ಜಾಮೀನಿನ ಮೇಲಿರುವ 8ನೇ ಆರೋಪಿ ರವಿಶಂಕರ್ ಹಾಗೂ 10ನೇ ಆರೋಪಿ ವಿನಯ್ ಕೂಡ ಮಾಫಿ ಸಾಕ್ಷಿಯಾಗಲು ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದು ದರ್ಶನ್ ವಿರುದ್ಧದ ಸಾಕ್ಷ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.
ಪ್ರದೋಷ್ನ ಈ ನಡೆ ದರ್ಶನ್ಗೆ ನೇರವಾಗಿ ಉರುಳಾಗುವುದರಿಂದ, ದರ್ಶನ್ ಪರ ಹಿರಿಯ ವಕೀಲರಾದ ಹಷ್ಮತ್ ಪಾಷಾ ಅವರು ಈ ಅರ್ಜಿಗೆ ಕೋರ್ಟ್ನಲ್ಲಿ ತೀವ್ರ ಆಕ್ಷೇಪಣೆ ಸಲ್ಲಿಸಿದ್ದಾರೆ. ಪ್ರದೋಷ್ ಹೇಳಿಕೆ ದಾಖಲಿಸುವುದನ್ನು ತಡೆಯಲು ಹೈಕೋರ್ಟ್ ಮೆಟ್ಟಿಲೇರಲು ದರ್ಶನ್ ಪರ ವಕೀಲರ ತಂಡ ಸಜ್ಜಾಗಿದೆ.
ಜೈಲಿನಲ್ಲಿ ಸುರಕ್ಷತೆಯ ಭೀತಿ:
ದರ್ಶನ್ ಕಡೆಯಿಂದ ತನಗೆ ಜೀವ ಬೆದರಿಕೆ ಹಾಗೂ ಟಾರ್ಚರ್ ಇರುವ ಸಾಧ್ಯತೆ ಇರುವುದರಿಂದ, ತನಗೆ ಜೈಲಿನಲ್ಲಿ ಪ್ರತ್ಯೇಕ ಕೊಠಡಿ ನೀಡಬೇಕು ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸಬೇಕು ಎಂದು ಪ್ರದೋಷ್ ಕೋರಿದ್ದಾನೆ.
ಇದನ್ನೂ ಓದಿ: ಕ್ರೈಮ್ ಸ್ಟೋರಿ… ಇವರು ಡ್ರಗ್ಸ್ ಟೀಚರ್ಸ್..!
ಮುಂದೇನು?
ಸದ್ಯ ಪ್ರಾಸಿಕ್ಯೂಷನ್ (ಪೊಲೀಸ್ ಮತ್ತು ಸರ್ಕಾರಿ ವಕೀಲರ ತಂಡ) ಪ್ರದೋಷ್ ಮಾಫಿ ಸಾಕ್ಷಿಯಾಗಲು ಸಮ್ಮತಿ ಸೂಚಿಸಿದೆ. ಬೆಂಗಳೂರಿನ 59ನೇ CCH ನ್ಯಾಯಾಲಯವು ಈ ಅರ್ಜಿಯ ಮೇಲಿನ ತನ್ನ ಅಂತಿಮ ತೀರ್ಪನ್ನು ಕಾಯ್ದಿರಿಸಿದೆ. ಒಂದು ವೇಳೆ ಕೋರ್ಟ್ ಪ್ರದೋಷ್ ಮನವಿಯನ್ನು ಪುರಸ್ಕರಿಸಿದರೆ, ದರ್ಶನ್ ಅವರ ಜೈಲು ವಾಸ ಮತ್ತಷ್ಟು ದೀರ್ಘವಾಗುವುದರ ಜೊತೆಗೆ ಶಿಕ್ಷೆಯಿಂದ ಪಾರಾಗುವುದು ಅತ್ಯಂತ ಕಠಿಣವಾಗಲಿದೆ.
ಜಿಯೋ ಕನ್ನಡ ನ್ಯೂಸ್ನ ವಾಟ್ಸ್ಆ್ಯಪ್ ಗ್ರೂಪ್ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.