Delimitation
ಭಾರತದ ಸಂಸದೀಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಬದಲಾವಣೆಗೆ ಕೇಂದ್ರ ಸರ್ಕಾರ ಮುನ್ನುಡಿ ಬರೆಯಲು ಸಜ್ಜಾಗಿದೆ. ಸಂವಿಧಾನದ (131ನೇ ತಿದ್ದುಪಡಿ) ವಿಧೇಯಕ, 2026 ರ ಅಡಿಯಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲು ಸರ್ಕಾರ ಮುಂದಾಗಿದೆ.
ಏನಿದು ಕ್ಷೇತ್ರ ಪುನರ್ ವಿಂಗಡಣೆ?
ಕ್ಷೇತ್ರ ಪುನರ್ ವಿಂಗಡಣೆ ಎಂದರೆ ಚುನಾವಣಾ ಕ್ಷೇತ್ರಗಳನ್ನು ವಿಂಗಡಿಸುವುದು. ಇನ್ನೂ ಸರಳವಾಗಿ ಹೇಳಬೇಕೆಂದರೆ, ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳನ್ನು ಹೆಚ್ಚಿಸುವುದು.
ಕೊನೆಯ ಬಾರಿ ಕ್ಷೇತ್ರ ಪುನರ್ ವಿಂಗಡಿಸಿದ್ದು ಯಾವಾಗ?
ಭಾರತದಲ್ಲಿ ಕೊನೆಯ ಬಾರಿಗೆ ಕ್ಷೇತ್ರ ಪುನರ್ ವಿಂಗಡಣೆಯನ್ನು 2002ರಲ್ಲಿ ಮಾಡಲಾಗಿತ್ತು. ಆದರೆ ಅಂದುಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆಯನ್ನು ಸ್ಥಿರವಾಗಿಡಲಾಗಿತ್ತು. ಕೇವಲ ಪ್ರತಿ ಕ್ಷೇತ್ರಗಳ ಭೌಗೋಳಿಕ ಗಡಿಗಳನ್ನು ಮಾತ್ರ ಮರುನಿರ್ಧರಿಸಲಾಯಿತು. ಅಲ್ಲದೆ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಮೀಸಲು ಕ್ಷೇತ್ರಗಳ ಸಂಖ್ಯೆಯಲ್ಲಿ ಮಾತ್ರ ಬದಲಾವಣೆ ಮಾಡಲಾಗಿತ್ತು. ಆದರೆ ಈ ಬಾರಿ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಸ್ಥಾನಗಳ ಹೆಚ್ಚಳ ಮತ್ತು ಹೊಸ ರಚನೆ
ಕೇಂದ್ರ ಸರ್ಕಾರವು ಲೋಕಸಭೆಯ ಒಟ್ಟು ಸದಸ್ಯ ಬಲವನ್ನು ಪ್ರಸ್ತುತ ಇರುವ 543 ರಿಂದ 850 ಕ್ಕೆ ಹೆಚ್ಚಿಸಲು ಉದ್ದೇಶಿಸಿದೆ.
- ರಾಜ್ಯಗಳಿಗೆ ಹಂಚಿಕೆ: 815 ಸ್ಥಾನಗಳು.
- ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ: 35 ಸ್ಥಾನಗಳು.
ಅಂದರೆ 2029ರ ಲೋಕಸಭಾ ಚುನಾವಣೆಯಲ್ಲಿ 850 ಸಂಸತ್ ಸ್ಥಾನಗಳಿಗಾಗಿ ಸ್ಪರ್ಧೆ ನಡೆಯಲಿದೆ. ಈ ಹಿಂದೆ 543 ಸದಸ್ಯ ಸ್ಥಾನಗಳಿಗಾಗಿ ಚುನಾವಣೆಯನ್ನು ನಡೆಸಲಾಗಿತ್ತು.
ಇದರ ಉದ್ದೇಶವೇನು?
ಸಂಸದರು ಪ್ರತಿನಿಧಿಸುವ ಮತದಾರರ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಆಡಳಿತಾತ್ಮಕ ಹೊಣೆಗಾರಿಕೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.
ಸಂವಿಧಾನ ತಿದ್ದುಪಡಿ ಮತ್ತು ಕಾನೂನು ಪ್ರಕ್ರಿಯೆ
ಏಪ್ರಿಲ್ 16, 2026 ರಂದು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ‘ಸಂವಿಧಾನ (131ನೇ ತಿದ್ದುಪಡಿ) ವಿಧೇಯಕ’ ಮತ್ತು ‘ಕ್ಷೇತ್ರ ಪುನರ್ ವಿಂಗಡಣಾ ವಿಧೇಯಕ, 2026’ ಅನ್ನು ಮಂಡಿಸಲಾಗಿದೆ.
2011ರ ಜನಗಣತಿ ಆಧಾರ: ಈ ಪುನರ್ ವಿಂಗಡಣೆಯನ್ನು 2011ರ ಜನಗಣತಿಯ ಆಧಾರದ ಮೇಲೆ ನಡೆಸಲು ಸರ್ಕಾರ ನಿರ್ಧರಿಸಿದೆ.
ಅಧಿಕಾರ: ಹೊಸ ಕ್ಷೇತ್ರ ಪುನರ್ ವಿಂಗಡಣಾ ಆಯೋಗವು ಸುಪ್ರೀಂ ಕೋರ್ಟ್ನ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ. ಈ ಆಯೋಗದ ನಿರ್ಧಾರಗಳು ಅಂತಿಮವಾಗಿದ್ದು, ಇವುಗಳನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಬರುವುದಿಲ್ಲ.
ಮಹಿಳಾ ಮೀಸಲಾತಿಯೊಂದಿಗೆ ಜೋಡಣೆ
ನಾರಿ ಶಕ್ತಿ ವಂದನ್ ಅಧಿನಿಯಮದಡಿ ಘೋಷಿಸಲಾದ 33% ಮಹಿಳಾ ಮೀಸಲಾತಿಯನ್ನು 2029ರ ಲೋಕಸಭಾ ಚುನಾವಣೆಯ ವೇಳೆಗೆ ಜಾರಿಗೆ ತರಲು ಈ ಪುನರ್ ವಿಂಗಡಣೆ ಅತ್ಯಗತ್ಯವಾಗಿದೆ. ಕ್ಷೇತ್ರಗಳ ಸಂಖ್ಯೆ ಹೆಚ್ಚುವುದರಿಂದ, ಹಾಲಿ ಇರುವ ಪುರುಷ ಸದಸ್ಯರ ಸ್ಥಾನಗಳಿಗೆ ತೊಂದರೆಯಾಗದಂತೆ ಮಹಿಳೆಯರಿಗೆ ಹೆಚ್ಚಿನ ಸ್ಥಾನಗಳನ್ನು ನೀಡಲು ಸರ್ಕಾರ ಈ ಮಾರ್ಗವನ್ನು ಅನುಸರಿಸುತ್ತಿದೆ.
ಕರ್ನಾಟಕ ಮತ್ತು ದಕ್ಷಿಣ ಭಾರತದ ಮೇಲಾಗುವ ಪರಿಣಾಮಗಳೇನು?
ಪ್ರಾತಿನಿಧ್ಯ ಕುಸಿತದ ಭೀತಿ: ದಕ್ಷಿಣ ಭಾರತದ ರಾಜ್ಯಗಳು (ಕರ್ನಾಟಕ ಸೇರಿದಂತೆ) ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿವೆ. ಆದರೆ ಉತ್ತರ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚಿದೆ. ಜನಸಂಖ್ಯೆ ಆಧಾರಿತ ವಿಂಗಡಣೆಯಿಂದಾಗಿ ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳ ಸಂಸದರ ಸಂಖ್ಯೆ ಹೆಚ್ಚಲಿದೆ, ಇದರಿಂದ ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಭಾವ ಕುಗ್ಗಬಹುದು ಎಂಬ ಆತಂಕವಿದೆ.
ರಾಜ್ಯ ಸರ್ಕಾರದ ನಿಲುವು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ವಿಧೇಯಕವು ದಕ್ಷಿಣ ಭಾರತದ ಪ್ರಗತಿಗೆ ನೀಡುತ್ತಿರುವ ‘ಶಿಕ್ಷೆ’ ಎಂದು ಕಿಡಿಕಾರಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ನೇತೃತ್ವದಲ್ಲಿ ದಕ್ಷಿಣದ ರಾಜ್ಯಗಳು ಈ ಬಗ್ಗೆ ಒಗ್ಗಟ್ಟಿನ ಪ್ರತಿರೋಧ ತೋರುತ್ತಿವೆ.
ಕೇಂದ್ರದ ಭರವಸೆ: ಯಾವುದೇ ರಾಜ್ಯದ ಪ್ರಾತಿನಿಧ್ಯ ಕುಸಿಯದಂತೆ ಮತ್ತು ಎಲ್ಲ ರಾಜ್ಯಗಳಿಗೂ ಸಮಾನವಾಗಿ ಸ್ಥಾನಗಳನ್ನು ಹೆಚ್ಚಿಸುವ ಸೂತ್ರವನ್ನು ಅನುಸರಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಕರ್ನಾಟಕದ ಪಾಲು ಎಷ್ಟು?
ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯ ಪ್ರಸ್ತಾವನೆಯ ಪ್ರಕಾರ, ಕರ್ನಾಟಕದಲ್ಲಿ ಪ್ರಸ್ತುತ ಇರುವ ಸ್ಥಾನಗಳು ಮತ್ತು ಹೆಚ್ಚಾಗಲಿರುವ ಅಂದಾಜು ಸಂಖ್ಯೆಯ ವಿವರ ಇಲ್ಲಿದೆ:
- ಪ್ರಸ್ತುತ ಇರುವ ಲೋಕಸಭಾ ಕ್ಷೇತ್ರಗಳು: 28
- ಹೆಚ್ಚಾಗಲಿರುವ ಸ್ಥಾನಗಳ ಸಂಖ್ಯೆ: 14
- ಒಟ್ಟು ನಿರೀಕ್ಷಿತ ಸ್ಥಾನಗಳು (2026ರ ನಂತರ): 42
ಮುಂದಿನ ನಡೆ?
ಏಪ್ರಿಲ್ 17, 2026 ರಂದು ಈ ವಿಧೇಯಕಗಳ ಮೇಲೆ ಸಂಸತ್ತಿನಲ್ಲಿ ಮತದಾನ ನಡೆಯಲಿದೆ. ವಿರೋಧ ಪಕ್ಷಗಳ ಒಕ್ಕೂಟವಾದ ‘INDIA’ ಬಣವು ಈ ಪುನರ್ ವಿಂಗಡಣೆಯ ಸ್ವರೂಪವನ್ನು ವಿರೋಧಿಸಲು ನಿರ್ಧರಿಸಿದೆ. ಇದಾಗ್ಯೂ ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡುವುದು ಖಚಿತ ಎಂದೇ ಹೇಳಬಹುದು.