Dawood Kingsway
ರಾಜ್ಯ ರಾಜಕಾರಣದಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ದಶಕಗಳಿಂದ ಕೇವಲ ಒಂದು “ಸ್ಥಿರ ಮತಬ್ಯಾಂಕ್” ಆಗಿ ಬಳಸಿಕೊಳ್ಳುತ್ತಿರುವ ಮನೋಭಾವಕ್ಕೆ ಈಗ ತೆರೆ ಬೀಳುವ ಕಾಲ ಹತ್ತಿರ ಬಂದಿದೆ. ದಾವಣಗೆರೆ ಚುನಾವಣಾ ನಿಮಿತ್ತ ಕಾಂಗ್ರೆಸ್ ಮುಸ್ಲಿಂ ನಾಯಕರ ಸರಣಿ ರಾಜೀನಾಮೆ ಮತ್ತು ಅಸಮಾಧಾನ ಸ್ಫೋಟಗೊಳ್ಳುತ್ತಿರುವ ಈ ಹೊತ್ತಿನಲ್ಲಿ, “ನಮ್ಮ ಮತ ನಮ್ಮ ಹಕ್ಕು, ಇದು ಯಾರದೂ ಖಾಸಗಿ ಆಸ್ತಿಯಲ್ಲ” ಎಂಬ ಗಂಭೀರ ಚರ್ಚೆ ಮುನ್ನೆಲೆಗೆ ಬಂದಿದೆ. ಈ ಕುರಿತು ಅಲ್ಪಸಂಖ್ಯಾತರ ಹಿತಚಿಂತಕ ಹಾಗೂ ಕೊಡಗು ಜನ ಅಭಿವೃದ್ಧಿ ಸಮಿತಿ ಸಂಸ್ಥಾಪಕರಾದ ದಾವೂದ್ ಕಿಂಗ್ಸ್ವೇ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಸಮುದಾಯದ ಬದಲಾಗುತ್ತಿರುವ ರಾಜಕೀಯ ದೃಷ್ಟಿಕೋನದ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ರಾಜಕೀಯ ಮತ್ತು ಹಿನ್ನಲೆ:
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಸಮರ್ಥ್ ಮಲ್ಲಿಕಾರ್ಜುನ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಬಿರುಕು ಕಾಣಿಸಿಕೊಂಡಿತು.
- ಅಬ್ದುಲ್ ಜಬ್ಬಾರ್ ರಾಜೀನಾಮೆ: ಟಿಕೆಟ್ ಆಕಾಂಕ್ಷಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್ ಅವರು ತಮ್ಮ ಮೇಲಿನ ಅಸಮಾಧಾನದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
- ಪಕ್ಷದಿಂದ ಅಮಾನತು: ರಾಜೀನಾಮೆಯನ್ನು ಅಂಗೀಕರಿಸಿದ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದ್ದಾರೆ.
- ನಸೀರ್ ಅಹ್ಮದ್ ಪದಚ್ಯುತಿ: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿದ್ದ ನಸೀರ್ ಅಹ್ಮದ್ ಅವರನ್ನು ಸಹ ಇದೇ ಕಾರಣಕ್ಕೆ ಸ್ಥಾನದಿಂದ ಕೆಳಗಿಳಿಸಲಾಗಿದೆ.
ಅಸಮಾಧಾನಕ್ಕೆ ಕಾರಣವೇನು?
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶೇ. 80ಕ್ಕಿಂತ ಹೆಚ್ಚು ಅಲ್ಪಸಂಖ್ಯಾತ ಮತದಾರರಿದ್ದರೂ, ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡದೆ ಶಾಮನೂರು ಕುಟುಂಬಕ್ಕೆ ಮಣೆ ಹಾಕಿದ್ದು ಈ ಬಂಡಾಯಕ್ಕೆ ಮುಖ್ಯ ಕಾರಣ.
ಪ್ರಾತಿನಿಧ್ಯದ ಕೊರತೆ: ಮುಸ್ಲಿಂ ಸಮುದಾಯವು ತಮಗೆ ಯೋಗ್ಯವಾದ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ಆಕ್ರೋಶ ಹೊರಹಾಕಿದೆ.
ಆಂತರಿಕ ಒಳಸಂಚಿನ ಆರೋಪ: ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿಯ ವಿರುದ್ಧವೇ ಕೆಲ ಮುಸ್ಲಿಂ ನಾಯಕರು ಕೆಲಸ ಮಾಡಿದ್ದಾರೆ ಮತ್ತು ಎಸ್ಡಿಪಿಐ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಮುಸ್ಲಿಮರಿಂದಲೇ ಆಕ್ರೋಶ:
ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಮುಸ್ಲಿಂ ಸಮುದಾಯವನ್ನು ಕೇವಲ ಒಂದು “ಸ್ಥಿರ ಮತ ಬ್ಯಾಂಕ್” ಎಂದು ಪರಿಗಣಿಸುವ ಮನೋಭಾವಕ್ಕೆ ಈಗ ತೆರೆ ಬೀಳುವ ಸಮಯ ಬಂದಿದೆ. “ನಮ್ಮ ಮತ ನಮ್ಮ ಹಕ್ಕು, ಇದು ಯಾರದೂ ಖಾಸಗಿ ಆಸ್ತಿಯಲ್ಲ. ಮುಸ್ಲಿಮರನ್ನು ಪಕ್ಷದ “ಸ್ಥಿರ ಮತ ಬ್ಯಾಂಕ್” ಎಂದು ನೋಡೋ ಮನೋಭಾವವೇ ತಪ್ಪು ಎಂದು ಅಲ್ಪ ಸಂಖ್ಯಾತರ ಹಿತಚಿಂತಕ ಹಾಗೂ ಕೊಡಗು ಜನ ಅಭಿವೃದ್ಧಿ ಸಮಿತಿ ಸಂಸ್ಥಾಪಕ ದಾವೂದ್ ಕಿಂಗ್ಸ್ವೇ ಅಭಿಪ್ರಾಯಪಟ್ಟಿದ್ದಾರೆ.
View this post on Instagram
ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿರುವ ದಾವೂದ್ ಕಿಂಗ್ಸ್ವೇ, ದಶಕಗಳಿಂದ ರಾಜಕೀಯ ಪಕ್ಷಗಳು ಚುನಾವಣಾ ಸಮಯದಲ್ಲಿ ಮುಸ್ಲಿಮರಿಗೆ ಬಣ್ಣಬಣ್ಣದ ಭರವಸೆಗಳನ್ನು ನೀಡುತ್ತಾ ಬಂದಿವೆ. ಆದರೆ, ಮತದಾನ ಮುಗಿದ ನಂತರ ಆ ಭರವಸೆಗಳು ಕೇವಲ ಕಾಗದದ ಮೇಲೆ ಉಳಿಯುತ್ತಿವೆಯೇ ಹೊರತು, ವಾಸ್ತವದಲ್ಲಿ ಶಿಕ್ಷಣ, ಉದ್ಯೋಗ ಅಥವಾ ಸಾಮಾಜಿಕ ಭದ್ರತೆಯ ರೂಪದಲ್ಲಿ ಸಮುದಾಯಕ್ಕೆ ತಲುಪುತ್ತಿಲ್ಲ. ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು “ನಿಮಗಾಗಿ ನಾವಿದ್ದೇವೆ” ಎಂದು ಹೇಳಿಕೊಂಡರೂ, ಸಮುದಾಯದ ತಳಮಟ್ಟದ ಸಮಸ್ಯೆಗಳು ಇಂದಿಗೂ ಹಾಗೆಯೇ ಇವೆ.
ಇಂದಿನ ಮುಸ್ಲಿಂ ಸಮುದಾಯ ಅತೀವವಾಗಿ ಜಾಗೃತವಾಗಿದೆ. ಅಂಧವಾಗಿ ಯಾವುದೋ ಒಂದು ಪಕ್ಷವನ್ನು ಅಥವಾ ನಾಯಕನನ್ನು ಅನುಸರಿಸುವ ಕಾಲ ಈಗ ಹಳೆಯದಾಗಿದೆ. ಈಗಿನ ಯುವಜನತೆ ಮತ್ತು ಮತದಾರರು ಪ್ರಶ್ನಿಸುತ್ತಿದ್ದಾರೆ.
“ನಮ್ಮ ಶೈಕ್ಷಣಿಕ ಪ್ರಗತಿಗೆ ನಿಮ್ಮ ಕೊಡುಗೆ ಏನು? ನಮ್ಮ ಯುವಕರಿಗೆ ಉದ್ಯೋಗಾವಕಾಶಗಳು ಎಲ್ಲಿವೆ? ನಮ್ಮ ರಕ್ಷಣೆ ಮತ್ತು ಗೌರವಕ್ಕೆ ನೀವು ನೀಡುವ ಭರವಸೆ ಏನು?” ಎಂದು ದಾವೂದ್ ಕಿಂಗ್ಸ್ವೇ ಪ್ರಶ್ನಿಸಿದ್ದಾರೆ.
ಕೆಲಸ ಮಾಡುವವರಿಗೆ ಮಾತ್ರ ಬೆಂಬಲ:
ಯಾರು ನಿಜವಾಗಿಯೂ ಅಭಿವೃದ್ಧಿಯ ಕೆಲಸ ಮಾಡುತ್ತಾರೋ, ಯಾರು ಸಮುದಾಯಕ್ಕೆ ಸಮಾನ ಗೌರವ ಮತ್ತು ಅವಕಾಶಗಳನ್ನು ನೀಡುತ್ತಾರೋ ಅಂತಹವರನ್ನು ಬೆಂಬಲಿಸಲು ಸಮುದಾಯ ನಿರ್ಧರಿಸಿದೆ. ರಾಜಕೀಯ ಲಾಭಕ್ಕಾಗಿ ಸಮುದಾಯವನ್ನು ಬಳಸಿಕೊಳ್ಳುವ ತಂತ್ರಗಾರಿಕೆಯನ್ನು ಜನ ಈಗ ಅರ್ಥಮಾಡಿಕೊಂಡಿದ್ದಾರೆ.
ನಾವು ಯಾರಿಗೂ ವಿರೋಧಿಗಳಲ್ಲ. ಆದರೆ ನಮ್ಮ ಹಕ್ಕುಗಳನ್ನು ಕಾಪಾಡುವ, ನಮ್ಮನ್ನು ಸಮಾನ ಪ್ರಜೆಗಳಾಗಿ ಕಾಣುವ ಮತ್ತು ಸಮಗ್ರ ಅಭಿವೃದ್ಧಿಗೆ ಶ್ರಮಿಸುವವರ ಜೊತೆಗೆ ನಾವಿರುತ್ತೇವೆ. ಸಮಾಜದಲ್ಲಿ ಗೌರವಯುತ ಜೀವನ ಮತ್ತು ಪ್ರಜಾಪ್ರಭುತ್ವದ ಹಕ್ಕುಗಳ ರಕ್ಷಣೆಯೇ ನಮ್ಮ ಮೊದಲ ಆದ್ಯತೆ. ಸರ್ಕಾರಗಳು ಕೂಡ ಇದೇ ರೀತಿಯಲ್ಲಿ ನಡೆದುಕೊಳ್ಳಬೇಕೆಂದು ಅಲ್ಪ ಸಂಖ್ಯಾತರ ಹಿತಚಿಂತಕ ಹಾಗೂ ಕೊಡಗು ಜನ ಅಭಿವೃದ್ಧಿ ಸಮಿತಿ ಸಂಸ್ಥಾಪಕ ದಾವೂದ್ ಕಿಂಗ್ಸ್ವೇ ಆಗ್ರಹಿಸಿದ್ದಾರೆ.