ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಕರ್ನಾಟಕ ಬಜೆಟ್ ಅನ್ನು ಮಾರ್ಚ್ 6, 2026 ರಂದು ಮಂಡಿಸಿದ್ದಾರೆ. ಈ ಬಜೆಟ್ ಬೆನ್ನಲ್ಲೇ ವಿರೋಧ ಪಕ್ಷಗಳು ಇದನ್ನು ಅಲ್ಪ ಸಂಖ್ಯಾತರನ್ನು ಒಲೈಸಲು ಮುಂಡಿಸಿದ ‘ಹಲಾಲ್ ಬಜೆಟ್’ ಎಂದು ಟೀಕಿಸಿದ್ದಾರೆ. ಅದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೆಲ ಬಿಜೆಪಿ ನಾಯಕರುಗಳು ಸತ್ಯವನ್ನು ಮರೆಮಾಚಿ ಜನರನ್ನು ಹಾದಿ ತಪ್ಪಿಸುವಂತಹ ಕೆಲಸ ಮಾಡಿದ್ದಾರೆ. ಏಕೆಂದರೆ ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ನ ಒಟ್ಟು ಗಾತ್ರ ₹4,48,004 ಕೋಟಿ. ಅಂದರೆ ಬರೋಬ್ಬರಿ 4.48 ಲಕ್ಷ ಕೋಟಿ ರೂ. ಬಜೆಟ್.
ಈ 4.48 ಲಕ್ಷ ಕೋಟಿ ರೂ. ಬಜೆಟ್ನಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ, ಅಂದರೆ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ, ಸಿಖ್, ಜನರಿಗೆ ಮೀಸಲಿಟ್ಟಿರುವ ಹಣ 4000 ಕೋಟಿಗಿಂತ ಕಡಿಮೆ ಎಂದರೆ ನಂಬಲೇಬೇಕು. ಅಂದರೆ ಒಟ್ಟು ಬಜೆಟ್ ಗಾತ್ರದ 1% ಕೂಡಾ ಕರ್ನಾಟಕದ ಒಟ್ಟು ಜನಸಂಖ್ಯೆಯ 15% ನಷ್ಟಿರುವ ಅಲ್ಪಸಂಖ್ಯಾತರಿಗೆ ಮೀಸಲಿಡಲಾಗಿಲ್ಲ.
ರಾಜ್ಯದ ಒಟ್ಟು ಜನಸಂಖ್ಯೆಯ 15% ಜನರನ್ನು ಹೊಂದಿರುವ ಅಲ್ಪಸಂಖ್ಯಾತರಿಗೆ ಬಜೆಟ್ನಲ್ಲಿ ಸಿಎಂ ಸಿದ್ಧರಾಮಯ್ಯ 1% ಅನ್ನು ಕೂಡ ಕೊಟ್ಟಿಲ್ಲ ಎಂಬುದೇ ಸತ್ಯ. ಇದಾಗ್ಯೂ ರಾಜ್ಯ ಬಿಜೆಪಿ ಬಜೆಟ್ಗೂ ಧರ್ಮಲೇಪನ ಮಾಡಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಇತ್ತ ಬಿಜೆಪಿ ಮಾಡಿರುವ ‘ಹಲಾಲ್ ಬಜೆಟ್’ ಗಂಭೀರ ಆರೋಪದಿಂದ ಇದೀಗ ಒಟ್ಟು 15% ಜನಸಂಖ್ಯೆ ಹೊಂದಿರುವ ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ, ಸಿಖ್ ಸಮುದಾಯದವರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ತಮ್ಮನ್ನು ಕಡೆಗಣಿಸಿರುವುದು ಗೊತ್ತಾಗಿದೆ ಎಂಬುದೇ ಸತ್ಯ.
ರಾಜ್ಯ ಬಜೆಟ್ನ ಮುಖ್ಯಾಂಶಗಳು:
- ಒಟ್ಟು ವೆಚ್ಚ: ₹4,48,004 ಕೋಟಿ.
- ರಾಜಸ್ವ ಸ್ವೀಕೃತಿ: ₹3,15,050 ಕೋಟಿ.
- ರಾಜಸ್ವ ಕೊರತೆ: ₹22,957 ಕೋಟಿ.
- ಹಣಕಾಸು ಕೊರತೆ: ₹97,449 ಕೋಟಿ (ಜಿಎಸ್ಡಿಪಿಯ 2.95%).
- ಸಾಲದ ಮೊತ್ತ: ₹1.32 ಲಕ್ಷ ಕೋಟಿ.
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ
- ರೈತರಿಗೆ ಸಾಲ: 38 ಲಕ್ಷ ರೈತರಿಗೆ ₹30,000 ಕೋಟಿ ಶೂನ್ಯ ಬಡ್ಡಿ ದರದ ಸಾಲ.
- ವಿದ್ಯುತ್ ಸಬ್ಸಿಡಿ: ಕೃಷಿ ಪಂಪ್ಸೆಟ್ಗಳಿಗೆ ₹19,290 ಕೋಟಿ ಸಹಾಯಧನ.
- ರಸ್ತೆ ಅಭಿವೃದ್ಧಿ: ‘ಪ್ರಗತಿ ಪಥ’ ಯೋಜನೆಯಡಿ ₹5,190 ಕೋಟಿ ವೆಚ್ಚದಲ್ಲಿ 7,110 ಕಿ.ಮೀ ಗ್ರಾಮೀಣ ರಸ್ತೆಗಳ ಅಭಿವೃದ್ಧಿ.
- ಗ್ರಾಮ ಪಂಚಾಯಿತಿ: ಎಲ್ಲಾ ಗ್ರಾಮ ಪಂಚಾಯಿತಿಗಳನ್ನು ‘ಮಹಾತ್ಮ ಗಾಂಧಿ ಗ್ರಾಮ ಪಂಚಾಯಿತಿ’ ಎಂದು ಮರುನಾಮಕರಣ.
ಬೆಂಗಳೂರು ಮತ್ತು ಮೂಲಸೌಕರ್ಯ
- ಬೆಂಗಳೂರು ಅಭಿವೃದ್ಧಿ: ಒಟ್ಟು ₹7,000 ಕೋಟಿ ಅನುದಾನ.
- 450 ಕಿ.ಮೀ ರಸ್ತೆ ವೈಟ್ ಟಾಪಿಂಗ್ಗೆ ₹3,000 ಕೋಟಿ.
- ಸಬರ್ಬನ್ ರೈಲು ಮತ್ತು ಮೆಟ್ರೋ ವಿಸ್ತರಣೆಗೆ (41 ಕಿ.ಮೀ) ₹500 ಕೋಟಿ.
- ಸಾರಿಗೆ: 3,000 ಹೊಸ ಬಿಎಂಟಿಸಿ ಬಸ್ಗಳ ಸೇರ್ಪಡೆ ಮತ್ತು ₹777 ಕೋಟಿ ವೆಚ್ಚದಲ್ಲಿ 1,250 ಇವಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ.
ಇಂಧನ ಮತ್ತು ತಂತ್ರಜ್ಞಾನ
- ಅನಂತ ಯೋಜನೆ: ಪಿಪಿಪಿ ಮಾದರಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸೋಲಾರ್ ಮೈಕ್ರೋಗ್ರಿಡ್ ಸ್ಥಾಪನೆ (ವಾರ್ಷಿಕ 4,000 ಮೆಗಾವ್ಯಾಟ್ ಗುರಿ).
- ಸೌರ ಕೃಷಿ: ₹10,500 ಕೋಟಿ ವೆಚ್ಚದಲ್ಲಿ 3,000 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರಗಳು.
- ಮೈಸೂರು ಐಟಿ ಹಬ್: ಬೆಂಗಳೂರಿನ ಒತ್ತಡ ಕಡಿಮೆ ಮಾಡಲು ಮೈಸೂರನ್ನು ರಾಜ್ಯದ ಎರಡನೇ ಪ್ರಮುಖ ಐಟಿ ಹಬ್ ಆಗಿ ಅಭಿವೃದ್ಧಿಪಡಿಸುವುದು.
ಶಿಕ್ಷಣ ಮತ್ತು ಆರೋಗ್ಯ
- ಶಿಕ್ಷಣ: ₹3,900 ಕೋಟಿ ವೆಚ್ಚದಲ್ಲಿ 800 ಹೊಸ ಕರ್ನಾಟಕ ಸಾರ್ವಜನಿಕ ಶಾಲೆಗಳ ಸ್ಥಾಪನೆ ಮತ್ತು 15,000 ಶಿಕ್ಷಕರ ನೇಮಕಾತಿ.
- ಉನ್ನತ ಶಿಕ್ಷಣ: ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ವಿಶ್ವವಿದ್ಯಾಲಯವನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ₹500 ಕೋಟಿ.
- ಆರೋಗ್ಯ: ಜಿಲ್ಲಾ ಆಸ್ಪತ್ರೆಗಳಲ್ಲಿ ಟ್ರಾಮಾ ಕೇರ್ ಸೆಂಟರ್ಗಳ ಸ್ಥಾಪನೆಗೆ ₹45 ಕೋಟಿ; ಬೆಂಗಳೂರು ಮತ್ತು ಕಲಬುರಗಿಯಲ್ಲಿ ಹೊಸ ಐವಿಎಫ್ (IVF) ಕೇಂದ್ರಗಳು.
ಇತರ ಪ್ರಮುಖ ನಿರ್ಧಾರಗಳು
- ಸೋಶಿಯಲ್ ಮೀಡಿಯಾ: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸುವ ಪ್ರಸ್ತಾವನೆ.
- ಪ್ರಾದೇಶಿಕ ಸಮಾನತೆ: ಗೋವಿಂದ ರಾವ್ ಸಮಿತಿ ವರದಿ ಅನ್ವಯ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ₹4,291 ಕೋಟಿ.
ಬಿಜೆಪಿ ಮಾಡಿರುವ ಆರೋಪಗಳು
ಓಲೈಕೆ ರಾಮಯ್ಯನವರು ಮಂಡಿಸಿದ ಕರ್ನಾಟಕ ಬ್ರದರ್ಸ್ ಬಜೆಟ್ 2026 ಮುಖ್ಯಾಂಶಗಳು…
#SalaRamaiah#CongressBogusBudget2026#CongressFailsKarnataka pic.twitter.com/rMUiPurqrQ
— BJP Karnataka (@BJP4Karnataka) March 6, 2026
ಇತ್ತ ಒಟ್ಟು ಬಜೆಟ್ನ ಶೇ. 1 ರಷ್ಟು ಅಲ್ಪಸಂಖ್ಯಾತ ಸಮುದಾಯಗಳಿಗೆ ಮೀಸಲಿಟ್ಟಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮಾಡಿರುವ ಈ ಗಂಭೀರ ಆರೋಪವು ಇದೀಗ ಚರ್ಚಗೆ ಕಾರಣವಾಗಿದೆ. ಈ ಚರ್ಚೆಯ ನಡುವೆ ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ, ಸಿಖ್ ಸಮುದಾಯಗಳು ಈ ಮಣ್ಣಿನ ನಿವಾಸಿಗಳಲ್ಲವೇ ಎಂಬ ಪ್ರಶ್ನೆಯನ್ನು ಹಲವು ಜಾಗೃತ ಕನ್ನಡಿಗರು ಮುಂದಿಡುತ್ತಿದ್ದಾರೆ.
ಇದನ್ನೂ ಓದಿ: ಈ ಸಮಸ್ಯೆಗಳಿಗೆ ಇದುವೇ ‘ಮನೆಮದ್ದು’
ಇತ್ತ ಬಿಜೆಪಿ ಮಾಡಿದ ಆರೋಪದಿಂದ ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ, ಸಿಖ್ ಸಮುದಾಯಗಳಿಗೆ ರಾಜ್ಯ ಸರ್ಕಾರ ಮಾಡಿರುವ ಕೇವಲ ‘1 ಪರ್ಸೆಂಟ್’ನ ಅನ್ಯಾಯ ಕೂಡ ಗೊತ್ತಾಗಿದೆ ಎಂಬುದೇ ಸತ್ಯ.